ಪುತ್ತೂರು: ಶಾಲೆಯಲ್ಲಿ ಲ್ಯಾಪ್ಟಾಪ್ ಕಳವು ಪ್ರಕರಣ: ಆರೋಪಿ ಬಂಧನ
ಪುತ್ತೂರು: ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಲ್ಯಾಪ್ ಟಾಪ್ ಕಳವು ಮಾಡಿದ ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳೂರು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಲುವಾಗಿ ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮಾರಾಟ ಮಾಡಿದ ಲ್ಯಾಪ್ ಟಾಪ್ ನ್ನು ಅಂಗಡಿ ಮಾಲೀಕನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಬಕ ಹಿಪ್ರಾ ಶಾಲೆಯಿಂದ 2020ರ ಫೆಬ್ರವರಿ 12ರ ಸಂಜೆ 4.30ರಿಂದ ಫೆಬ್ರವರಿ 13ರ ಬೆಳಗ್ಗೆ 8.30ರೊಳಗೆ 24,990 ರೂ. ಮೌಲ್ಯದ ಲ್ಯಾಪ್ ಟಾಪ್ ಕಳವಾಗಿರುವ ಬಗ್ಗೆ ಶಾಲೆಯ ಮುಖ್ಯ ಗುರು ಸುಲೋಚನಾ ಕೆ. ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಅವಧಿಯಲ್ಲಿ ಶಾಲೆಯ ಎಲ್ಲಾ ಕೊಠಡಿಗಳಿಗೆ ಬೀಗ ಹಾಕಲಾಗಿದ್ದರೂ, ಬೀಗ ಮುರಿದು ಕಪಾಟಿನ ಬಾಗಿಲು ತೆರೆದು ಎಲ್ಲಾ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅದೇ ಕೋಣೆಯ ಸೆಲ್ಫ್ ಮೇಲಿದ್ದ ಲೆನೋವಾ ಬ್ರಾಂಡ್ ನ ಲ್ಯಾಪ್ ಟಾಪ್ ಕಳವು ಮಾಡಿ ಹೋಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು.




