ಬಂದ್ ಗೆ ಬೆಂಬಲ: ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್ ರಸ್ತೆ, ಅಂಗಡಿ-ಮುಂಗಟ್ಟು, ಧಕ್ಕೆಯಲ್ಲಿ ವ್ಯವಹಾರ ಸ್ಥಗಿತ
ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ತೀರ್ಪು ಅತೃಪ್ತಿಕರವಾಗಿದೆ. ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ ಒಕ್ಕೂಟಗಳು ಗುರುವಾರದಂದು ಬಂದ್ ಕರೆ ನೀಡಿರುವ ಹಿನ್ನಲೆಯಲ್ಲಿ ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ , ಮಳಿಗೆಗಳು ತೆರೆಯದೆ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.

ಸೆಂಟ್ರಲ್ ಮಾರ್ಕೆಟ್ , ಸ್ಟೇಟ್ ಬ್ಯಾಂಕ್ ರೋಡ್ ಸೈಡ್ ಅಂಗಡಿಗಳು, ಧಕ್ಕೆಯಲ್ಲಿ ಮುಸ್ಲಿಂರ ಹಲವು ಅಂಗಡಿಗಳು ವ್ಯವಹಾರ ಚಟುವಟಿಯನ್ನು ಸ್ಥಗಿತಗೊಳಿಸಿದೆ.

ಅಮೀರ್-ಇ-ಶರಿಯತ್ ಕರೆ ನೀಡಿರುವ ಬಂದ್ ಗೆ ಕರಾವಳಿಯ ಬಹುತೇಕ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿದೆ. ಬಂದ್ ಶಾಂತಿಯುತವಾಗಿರಬೇಕು. ಯಾರೂ ಒತ್ತಾಯ ಮಾಡಬಾರದು. ಯಾವುದೇ ಪ್ರತಿಭಟನಾ ಸಭೆಗಳು ನಡೆಯಬಾರದು ಎಂದು ಅಮೀರ್-ಇ-ಶರಿಯತ್ ಹೇಳಿತ್ತು.

ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.




