ಕುದುರೆ ಏರಿ ವಿಧಾನಸಭೆಗೆ ಬಂದ ಕಾಂಗ್ರೆಸ್ ಶಾಸಕಿ
ರಾಂಚಿ: ಜಾರ್ಖಂಡ್ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಕುದುರೆ ಏರಿ ವಿಧಾನಸಭೆಗೆ ಆಗಮಿಸಿ ಗಮನ ಸೆಳೆದಿದ್ದಾರೆ.
ಅಂಬಾ ಪ್ರಸಾದ್ ಅವರು ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಬಾರ್ಕಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಅವರು ಇಂದು ವಿಧಾನಸಭೆಗೆ ಕುದುರೆ ಏರಿ ಬರುವ ಮೂಲಕ ಎಲ್ಲರ ಗಮನ ಸೆಳೆದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬಾ ಪ್ರಸಾದ್, ಈ ಕುದುರೆಯನ್ನು ನನಗೆ ಸೇನೆಯ ನಿವೃತ್ತ ಅಧಿಕಾರಿ ರವಿ ರಾಥೋಡ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನಚರಣೆಯ ಪ್ರಯುಕ್ತ ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬ ಮಹಿಳೆಯಲ್ಲೂ ದುರ್ಗಾ, ಝಾನ್ಸಿ ಕಿ ರಾಣಿ ಇದ್ದಾಳೆ. ಪ್ರತಿ ಸವಾಲನ್ನು ಮಹಿಳೆ ಶಕ್ತಿಯಿಂದ ಎದುರಿಸಬೇಕು. ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಪ್ರತಿ ಕ್ಷೇತ್ರದಲ್ಲೂ ಮಹಿಳೆಯನ್ನು ಮುಂದೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.




