ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರು: ಬಿಜೆಪಿ, ಬಜರಂಗದಳದ ಕಾರ್ಯಕರ್ತರ ಬಂಧನ
ಮುಂಬೈ: ಮಲಾಡ್ನಲ್ಲಿರುವ ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
“ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ನಾವು ಎರಡು ವಿಭಿನ್ನ ಸ್ಥಳಗಳಿಂದ ಬಿಜೆಪಿ ಮತ್ತು ಬಜರಂಗದಳದ 64 ಕಾರ್ಯಕರ್ತರನ್ನು ಬಂಧಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಅಸ್ಲಾಂ ಶೇಖ್ ಅವರು, ಕಳೆದ 70 ವರ್ಷಗಳಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆಯದ ಕಾರಣ ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶವನ್ನು ಅಪಮಾನಿಸಲು ತನ್ನ ಗೂಂಡಾಗಳನ್ನು ಕಳುಹಿಸಿದೆ ಎಂದು ವಾಗ್ದಾಳಿ ನಡೆಸಿದರು.
”ಕಳೆದ 70 ವರ್ಷಗಳಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ, ಇಂದು ಬಿಜೆಪಿ ತನ್ನ ಗೂಂಡಾಗಳನ್ನು ಕಳುಹಿಸಿ ದೇಶಕ್ಕೆ ಅಪಮಾನ ಮಾಡಲು ಮುಂದಾಗಿದೆ ಮತ್ತು ಯೋಜನೆಗಳ ಹೆಸರಿನ ಬಗ್ಗೆ ವಿವಾದ ಸೃಷ್ಟಿಸಿ ಅಭಿವೃದ್ಧಿ ಮಾಡಲು ಬಿಡುವುದಿಲ್ಲ” ಎಂದು ಅಸ್ಲಾಂ ಶೇಕ್ ವರದಿಗಾರರಿಗೆ ತಿಳಿಸಿದ್ದಾರೆ.




