ಕೊರಗಜ್ಜನ ವೇಷ ಧರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಗತಿಪರ ಸಂಘಟನೆಗಳಿಂದ ವಿಟ್ಲ ಠಾಣಾಧಿಕಾರಿಗಳಿಗೆ ಮನವಿ
ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ವರ ಉಪ್ಪಳ ನಿವಾಸಿ ಉಮರುಳ್ಳ ಭಾಷಿತ್ ಎಂಬವನು ಕೊರಗಜ್ಜನ ವೇಷ ಧರಿಸಿ ತನ್ನ ಸಂಘಡಿಗರೊಂದಿಗೆ ಸೇರಿಸಿ ಕುಣಿದು ಅಸಭ್ಯ ವಾಗಿ ವರ್ತಿಸಿದ ಘಟನೆ ನಡೆದಿದ್ದು ಇಂತಹ ಘಟನೆಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಇಂತಹ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಈ ಘಟನೆಯ ಲಾಭ ಪಡೆದು ಕೆಲವು ಶಕ್ತಿಗಳು ಸಮಾಜದಲ್ಲಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು ಇಂತಹ ಶಕ್ತಿ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ವಿಟ್ಲ ಆರಕ್ಷಕ ಠಾಣಾಧಿಕಾರಿಗಳಿಗೆ ಮನವಿ ನೀಡಲಾಯಿತು.
ನಿಯೋಗದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ರಾಜಾ ಚೆಂಡ್ತಿಮಾರ್, ಸಿ.ಪಿ.ಐ.ಎಂ ಮುಖಂಡರಾದ ರಾಮಣ್ಣ ವಿಟ್ಲ,ಪ್ರಜಾ ಪರಿವರ್ತನಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಕೃಷ್ಣಪ್ಪ ಪುದೊಟ್ಟು, ಉಪಾಧ್ಯಕ್ಷರಾದ ಬಿ.ಟಿ.ಕುಮಾರ್, ದಲಿತ ಸಂಘಟನೆಯ ಮುಖಂಡರಾದ ನಾರಾಯಣ ನಂದಾವರ ಮುಂತಾದವರು ಇದ್ದರು.




