ಸುಳ್ಯ ತಾಲೂಕು ವಕೀಲರ ಸಂಘದ ಮಹಾಸಭೆ:
ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಮಾರ್ಚ್ 25ರಂದು ಚುನಾವಣೆಗೆ ಸಮಯ ನಿಗದಿ
ಸುಳ್ಯ: ತಾಲೂಕು ವಕೀಲರ ಸಂಘದ ಮಹಾಸಭೆ ಇಂದು ಸುಳ್ಯ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ವಹಿಸಿದ್ದರು.

ಕಳೆದ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಗಾಂಭೀರ್ ವಾಚಿಸಿದರು. ಕೋಶಾಧಿಕಾರಿ ವಿನಯಕುಮಾರ್ ಮುಳುಗಾಡು ಲೆಕ್ಕಪತ್ರವನ್ನು ಮಂಡಿಸಿದರು.
ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ಜನವರಿ 31 ರಂದು ನಡೆದ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿದ್ದಾರೆ ಎನ್ನಲಾದ ಪತ್ರಿಕೆಯಲ್ಲಿ ಬಂದ ವರದಿಯ ವಿಷಯದ ಕುರಿತು ಚರ್ಚೆ ನಡೆದು ಸರ್ಕಾರಿ ಜಾಗವನ್ನು ಮಾರಾಟ ಮಾಡುವಲ್ಲಿ ವಕೀಲರು ದಂಧೆ ನಡೆಸುತ್ತಿದ್ದಾರೆ, ಮತ್ತು ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಪದ ಬಳಸಿ ಇಡೀ ವಕೀಲರ ಸಮುದಾಯಕ್ಕೆ ಅವಾಮಾನ ಮಾಡಿರುವುದು ಖಂಡನೀಯ. ಆದ್ದರಿಂದ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರು ಬೇಸರತ್ ಕ್ಷಮೆಯಾಚಿಸಬೇಕಾಗಿ ಸಭೆಯಲ್ಲಿ ಒಕ್ಕೊರಳ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.
ನಂತರ ಅಧ್ಯಕ್ಷತೆ ವಹಿಸಿದ್ದ ವೆಂಕಪ್ಪ ಗೌಡ ಕಳೆದ ಸಾಲಿನಲ್ಲಿ ಸಂಘದ ವತಿಯಿಂದ ನಡೆಸಿದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿ ಸಹಕರಿಸಿದ ಸರ್ವ ಸದಸ್ಯರಿಗೂ ಧನ್ಯವಾದವನ್ನು ಸಮರ್ಪಿಸಿದರು.
ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಮಾರ್ಚ್ 25 ರಂದು ಚುನಾವಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಯಿತು.
ವೇದಿಕೆಯಲ್ಲಿ ಸುಳ್ಯದ ಹಿರಿಯ ನ್ಯಾಯಾಧೀಶ ಸೋಮಶೇಖರ ಎ ಉಪಸ್ಥಿತರಿದ್ದು ಸಂಘದ ಕಾರ್ಯಚಟುವಟಿಕೆಗಳ ಚರ್ಚೆಯನ್ನು ಆಲಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸತೀಶ್ ಕುಂಭಕೊಡು,ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತ್ ಕುಕ್ಕೆಟ್ಟಿ, ಜತೆ ಕಾರ್ಯದರ್ಶಿ ನಿರ್ಮಲ ಕೆಎಸ್, ಗ್ರಂಥಪಾಲಕ ಹರ್ಷಿತ್, ಕ್ರೀಡಾ ಕಾರ್ಯದರ್ಶಿ ಜಗದೀಶ್ ಉಪಸ್ಥಿತರಿದ್ದರು.ಸಂಘದ ಉಪಾಧ್ಯಕ್ಷ ಸತೀಶ್ ಕುಂಭಕೊಡು ಸ್ವಾಗತಿಸಿ, ರಂಜಿತ್ ಕುಕ್ಕೆಟ್ಟಿ ವಂದಿಸಿದರು.




