ಸುಳ್ಯ: ಮೂರನೇ ತರಗತಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲು
ಸುಳ್ಯ: ತಾಲ್ಲೂಕಿನ ಗೂನಡ್ಕ ಪರಿಸರದ ಮಾರುತಿ ಶಿಕ್ಷಣ ಸಂಸ್ಥೆಯ ಸದಸ್ಯ ಕಿಶೋರ್ ಎಂಬುವವರು ಶಿಸ್ತು ಉಲ್ಲಂಘನೆ ನೆಪದಲ್ಲಿ ಕಬ್ಬಿಣದ ರಾಡಿನಿಂದ ಮೂರನೆಯ ತರಗತಿಯ ವಿದ್ಯಾರ್ಥಿಯೋರ್ವನಿಗೆ ಹಲ್ಲೆ ನಡೆಸಿರುವ ಆರೋಪ ಡಿಸೆಂಬರ್ 29ರಂದು ವರದಿಯಾಗಿ ಸಂಚಲನವನ್ನು ಮೂಡಿಸಿತು.
ಘಟನೆಯಿಂದ ಬಾಲಕನ ಬೆನ್ನು ಮತ್ತು ಕಾಲಿನ ಭಾಗಗಳಿಗೆ ಬಾಸುಂಡೆಯ ಗಾಯಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಬಾರಿ ಚರ್ಚೆಗಳು ನಡೆಯುತ್ತಿದ್ದವು, ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು ಜಿ ಕೆ ಹಮೀದ್ ಮತ್ತು ಡಾ. ಲೀಲಾಧರ್ ರವರು ಈ ವಿಷಯದ ಕುರಿತು ಪೋಷಕರು ಮತ್ತು ಶಿಕ್ಷಣ ಸಂಸ್ಥೆಯವರ ನಡುವೆ ಮಾತನಾಡಿ ವಿಷಯವನ್ನು ಇತ್ಯರ್ಥಪಡಿಸುವಲ್ಲಿ ಸಹಕರಿಸಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಕಿಶೋರ್ ಎಂಬುವವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಕಿಶೋರ್ ರವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಮಾಧ್ಯಮಕ್ಕೆ ಮಾಹಿತಿ ನೀಡಿ ಈ ವಿಷಯದ ಕುರಿತು ಸತ್ಯಾಸತ್ಯತೆಯನ್ನು ತಿಳಿಯಲು ಘಟನಾ ಸ್ಥಳಕ್ಕೆ ನಾವು ಹೋಗಿದ್ದೆವು. ಆದರೆ ಯಾರ ಪರ ಅಥವಾ ವಿರೋಧ ವಾಗಿ ಹೋಗಿದ್ದಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದ್ದೇನೆ. ಆದರೆ ನನ್ನನ್ನು ತೇಜೋವಧೆ ಮಾಡುವ ಉದ್ದೇಶದಿಂದ ಕೆಲವರು ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಇದು ಸರಿಯಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಾನೂನಿನ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.




