ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯ ಕಾರ್ಯಾಚರಣೆ:
ಸುಳ್ಯ ಹಾಸ್ಟೆಲ್ ನಲ್ಲಿ ಬಾಡಿಗೆದಾರ ಸಂಗ್ರಹಿಸಿಟ್ಟಿದ್ದ 11 ಕೆ.ಜಿ. ಗಾಂಜಾ ವಶ
ಸುಳ್ಯ: ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ಇಂದು ಜಂಟಿ ಕಾರ್ಯಾಚರಣೆ ನಡೆಸಿ ಸುಳ್ಯ ಅಂಬಟೆಡ್ಕದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಪುತ್ತೂರು ಅಬಕಾರಿ ಇಲಾಖೆಯವರು ಸುಳ್ಯ ಅಬಕಾರಿ ಇಲಾಖೆಯವರೊಂದಿಗೆ ಸೇರಿ ಇಂದು ಸಂಜೆ ಜಂಟಿ ಕಾರ್ಯಾಚರಣೆ ನಡೆಸಿದರು.
ಕೊಠಡಿಯನ್ನು ತಪಾಸಣೆ ಮಾಡುವ ವೇಳೆ 11.5 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಈ ವೇಳೆ ಮನೆಯೊಳಗಿದ್ದ ಮೊಯಿದ್ದೀನ್ ಕುಂಞಿ ಪರಾರಿಯಾಗಿದ್ದು ಸಲಾಹುದ್ದೀನ್ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಯಿದ್ದೀನ್ ಕುಂಞಿಯವರ ಕಾರನ್ನು ಕೂಡಾ ವಶಕ್ಕೆ ಪಡೆದಿದ್ದು, ಅದರಲ್ಲಿ ಕೂಡಾ 1 ಕೆ.ಜಿ. ಗಾಂಜಾ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅಬಕಾರಿ ಉಪಾಧೀಕ್ಷಕರಾದ ಶಿವಪ್ರಸಾದ್, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ ಪೈ, ಸುಳ್ಯ ಅಬಕಾರಿ ನಿರೀಕ್ಷಕಿ ರಾಧಾ, ಸಿಬ್ಬಂದಿಗಳಾದ ವಿಜಯಕುಮಾರ್, ಪ್ರೇಮಾನಂದ, ಯಲ್ಲಪ್ಪ, ಪ್ರಶಾಂತ್, ಶರಣಪ್ಪ, ಅಮರೇಶ್, ಅಶೋಕ್, ಶರತ್, ತಿಪ್ಪೇಸ್ವಾಮಿ, ನೀಲಾಧರ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.




