ಬೈರಿಕಟ್ಟೆಯಲ್ಲಿ ಸೌಹಾರ್ದತೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಬೈರಿಕಟ್ಟೆ ಫ್ರೆಂಡ್ಸ್ ವಾಲಿಬಾಲ್ ತಂಡದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸೌಹಾರ್ದತೆಯಿಂದ ಆಚರಿಸಲಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಒಗ್ಗಟ್ಟಿನಿಂದ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಅಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಚಂದ್ರಶೇಖರ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಜೀದ್ ಕನ್ನ್ಯಾನ, ರವೀಶ್, ಸದಾಶಿವ, ದೇಲಂತಬೆಟ್ಟು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಗೂ ಜಡ್ಡು ನಾಗರಾಜ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಬಿ.ಬಿ. ಮೊಯ್ದಿನ್ ಅವರು, ನಾಡಿನಲ್ಲಿ ಸದಾ ಸೌಹಾರ್ದತೆ ಮತ್ತು ಒಗ್ಗಟ್ಟು ಉಳಿಯಬೇಕು. “ಸರ್ವೇ ಭವಂತು ಸುಖಿನಃ” ಎಂಬ ಸಂದೇಶದಂತೆ ಎಲ್ಲರೂ ಸುಖವಾಗಿ ಮತ್ತು ಶಾಂತಿಯಿಂದ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ 100 ಮೀಟರ್ ಓಟ, ಕಪ್ಪೆಜಿಗಿತ, ಗೋಣಿಚೀಲ ಓಟ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳೂ ನಡೆಯಿತು.





