ಕೊಲ್ಕತ್ತಾ: ಮೆಸ್ಸಿ ಕಾರ್ಯಕ್ರಮದ ಟಿಕೆಟ್ ಹಣ ಅಭಿಮಾನಿಗಳಿಗೆ ಮರುಪಾವತಿ: ಸುವೇಂದು ಅಧಿಕಾರಿ ಭರವಸೆ
ಕೊಲ್ಕತ್ತಾ: ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದ ವೇಳೆ ಉಂಟಾದ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಟಿಕೆಟ್ ಖರೀದಿಸಿದ್ದ 33 ಸಾವಿರ ಅಭಿಮಾನಿಗಳ ಹಣವನ್ನು ರಾಜ್ಯದ ಕ್ರೀಡಾ ಬಜೆಟ್ನಿಂದ ಮರುಪಾವತಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಬನ್ನಾದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2025 ಡಿಸೆಂಬರ್ 13 ರಂದು ಯುವ ಭಾರತೀ ಕ್ರೀಡಾಂಗಣದಲ್ಲಿ ನಡೆದ ಮೆಸ್ಸಿ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಉಂಟಾದ ಗೊಂದಲಕ್ಕೆ ತೃಣಮೂಲ ಕಾಂಗ್ರೆಸ್ ಸರ್ಕಾರದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರ ಅತಿಯಾದ ಮಧ್ಯಪ್ರವೇಶ ಕಾರಣ ಎಂದು ಆರೋಪಿಸಲಾಗಿತ್ತು.
ಕಾರ್ಯಕ್ರಮ ವೀಕ್ಷಿಸಲು 4,000 ಹಾಗೂ 6,000 ರೂ.ನೀಡಿ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರು ಹಣ ಮರುಪಾವತಿಸುವಂತೆ ಆಗ್ರಹಿಸಿದ್ದರು. ಆದರೆ ಈವರೆಗೆ ಹಣ ಮರುಪಾವತಿಯಾಗಿರಲಿಲ್ಲ.
“ಮೆಸ್ಸಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರು 4,000 ಮತ್ತು 6,000 ರೂ.ನೀಡಿ ಟಿಕೆಟ್ ಖರೀದಿಸಿದ್ದರು. ಈ 33 ಸಾವಿರ ಕ್ರೀಡಾಭಿಮಾನಿಗಳು ಪಾವತಿಸಿದ ಹಣವನ್ನು ಮರುಪಾವತಿಸುವುದು ನನ್ನ ಆಶಯ. ಈ ಕುರಿತು ಆಂತರಿಕವಾಗಿ ಪ್ರಕ್ರಿಯೆ ಆರಂಭಿಸಿದ್ದೇನೆ. ಇದನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ,” ಎಂದು ಸುವೇಂದು ಅಧಿಕಾರಿ ಹೇಳಿದರು.





