ಛತ್ತೀಸ್ಗಢ: ಲ್ಯಾಂಡಿಂಗ್ ವೇಳೆ ವಿಮಾನದ ಟೈರ್ ಬ್ಲಾಸ್ಟ್: ತಪ್ಪಿದ ಭಾರಿ ಅನಾಹುತ, 41 ಪ್ರಯಾಣಿಕರು ಸುರಕ್ಷಿತ
ಛತ್ತೀಸ್ಗಢ: ಬಿಲಾಸ್ಪುರದ ಬಿಲಾಸಾ ದೇವಿ ಕೇವಟ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ಆಗಮಿಸಿದ ಅಲಯನ್ಸ್ ಏರ್ ವಿಮಾನವು ಲ್ಯಾಂಡಿಂಗ್ ಆಗುವ ವೇಳೆ ಎಡಭಾಗದ ಟೈರ್ ಸ್ಪೋಟಗೊಂಡು ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಲ್ಯಾಂಡಿಂಗ್ ವೇಳೆ ಭಾರಿ ಶಬ್ದದೊಂದಿಗೆ ಟೈರ್ ಪಂಕ್ಚರ್ ಆದರೂ, ಪೈಲಟ್ ತಕ್ಷಣವೇ ವಿಮಾನದ ಮೇಲಿನ ನಿಯಂತ್ರಣ ಸಾಧಿಸಿ ರನ್ವೇ ಪಕ್ಕದಲ್ಲಿ ಸುರಕ್ಷಿತವಾಗಿ ನಿಲ್ಲಿಸುವ ಮೂಲಕ ಪವಾಡಸದೃಶವಾಗಿ ಅನಾಹುತವನ್ನು ತಡೆದಿದ್ದಾರೆ.
ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿದ್ದ 37 ಪ್ರಯಾಣಿಕರು ಹಾಗೂ 4 ಸಿಬ್ಬಂದಿ ಸೇರಿದಂತೆ ಒಟ್ಟು 41 ಜನರನ್ನು ವಿಮಾನ ನಿಲ್ದಾಣದ ಭದ್ರತಾ ಹಾಗೂ ಅಗ್ನಿಶಾಮಕ ಸಿಬ್ಬಂದಿ ರನ್ವೇಯಿಂದ ಟರ್ಮಿನಲ್ ಕಟ್ಟಡಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಈ ತಾಂತ್ರಿಕ ಅಡಚಣೆಯ ಕಾರಣದಿಂದಾಗಿ ಬಿಲಾಸ್ಪುರದಿಂದ ಪ್ರಯಾಗ್ರಾಜ್ಗೆ ತೆರಳಬೇಕಿದ್ದ ಮುಂದಿನ ವಿಮಾನ ಸೇವೆಯನ್ನು ತಕ್ಷಣದಿಂದಲೇ ರದ್ದುಗೊಳಿಸಲಾಗಿದೆ. ಪ್ರಸ್ತುತ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನಯಾನ ಸಂಸ್ಥೆಯ ತಾಂತ್ರಿಕ ತಂಡವು ಟೈರ್ ಸ್ಪೋಟಗೊಳ್ಳಲು ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿವೆ.





