ಪುತ್ತೂರು ತಾಲೂಕಿನ ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಲ್ಲೇಗ ಸಮೀಪದ ಮುರ ನಿವಾಸಿ ಹರ್ಷದ್ (ಯುವಕ) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಹರ್ಷದ್ ಅವರು ಕಲ್ಲೇಗ ಜುಮಾ ಮಸೀದಿ ಜಮಾಅತ್ಗೆ ಒಳಪಟ್ಟ ಮುರ ನಿವಾಸಿಯಾಗಿದ್ದು, ಮರ್ಹೂಮ್ ರಝಾಕ್ ಸಾಹೇಬ್ ಅವರ ಪುತ್ರ ಹಾಗೂ ಇರ್ಷಾದ್ ಅವರ ಸಹೋದರರಾಗಿದ್ದಾರೆ. ಅವರು ನೆಹರುನಗರದ ‘ರೆಕ್ಸಾ ಶಾಪ್’ನಲ್ಲಿ ಉದ್ಯೋಗಿಯಾಗಿದ್ದರು.
ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಹಾನಿಗೊಳಗಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಕಲ್ಲೇಗ ಜಮಾಅತ್ ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಪರ್ಲೋಟು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹರ್ಷದ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.





