ಕಡಬ: ಆಟೋ ಚಾಲಕ ಗುರುಪ್ರಸಾದ್ ಹೃದಯಾಘಾತದಿಂದ ನಿಧನ: ಮಸೀದಿಯ ಮೀಲಾದ್ ಕಾರ್ಯಕ್ರಮ ರದ್ದು
ರಾಮಕುಂಜ: ಕಡಬ ತಾಲೂಕು ಕೊಯಿಲ
ಗ್ರಾಮದ ಕುದುಲೂರು ನಿವಾಸಿ ಅಣ್ಣು ಎಂಬವರ ಪುತ್ರ ಗುರುಪ್ರಸಾದ್ (35ವ.)ಅವರು ಆ.22ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಗುರುಪ್ರಸಾದ್ ಅವರು ರಿಕ್ಷಾ ಚಾಲಕರಾಗಿದ್ದು ಗೋಳಿತ್ತಡಿ ಪೇಟೆಯಲ್ಲಿ ಬಾಡಿಗೆಗೆ ರಿಕ್ಷಾ ಓಡಾಟ ನಡೆಸುತ್ತಿದ್ದರು. ಇದರ ಜೊತೆಗೆ ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದರು.
ಆ.22ರಂದು ಮಧ್ಯಾಹ್ನ ಎಂದಿನಂತೆ ಶಾಲೆಗೆ ಮಕ್ಕಳನ್ನು ಕರೆತರಲು ಮನೆಯಿಂದ ಹೊರಡುವ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆದೊಯ್ದರಾದರೂ ಗುರುಪ್ರಸಾದ್ ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಮಸೀದಿ ಕಾರ್ಯಕ್ರಮ ರದ್ದು : ಕುದಲೂರು ಮಸೀದಿ ಬಳಿಯೇ ಗುರುಪ್ರಸಾದ್ ಅವರ ಮನೆಯೂ ಇದ್ದು ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕುದುಲೂರು ಮುಬಾರಕ್ ಜುಮಾ ಮಸೀದಿಯಲ್ಲಿ ಮಿಲಾದ್ ನಬಿ ಪ್ರಯುಕ್ತ ಆ.22ರಂದು ನಡೆಯಬೇಕಿದ್ದ ವಿದ್ಯಾರ್ಥಿಗಳ ಕಾರ್ಯಕ್ರಮ ಮುಂದೂಡಿ ಸೌಹಾರ್ದತೆ ಮರೆದಿದ್ದಾರೆ.





