ಮಡಿಕೇರಿ: ವಾಯು ವಿಹಾರಕ್ಕೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಯಿಂದ ಮೃತ್ಯು
ಮಡಿಕೇರಿ: ವಾಯು ವಿಹಾರಕ್ಕೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆ ಶನಿವಾರ ಸಂಜೆ ಶ್ರೀಮಂಗಲ ಸಮೀಪದ ತೆರಾಲು ಗ್ರಾಮದಲ್ಲಿ ನಡೆದಿದೆ.
ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಆರ್.ಆರ್. ನಗರ ನಿವಾಸಿ ಮುರಳೀಕೃಷ್ಣ(41) ಮತ್ತು ಅವರ ಸ್ನೇಹಿತರು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ತೆರಾಲು ಗ್ರಾಮದ ಹೋಂ ಸ್ಟೇ ಒಂದಕ್ಕೆ ಆಗಮಿಸಿದ್ದರು.
ಸಂಜೆ 5.30ರ ವೇಳೆ ಏಕಾಂಗಿಯಾಗಿ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದ ಸಂದರ್ಭ ಕಾಡಾನೆ ನಾಯಿ ಒಂದನ್ನು ಅಟ್ಟಿಸಿಕೊಂಡು ಬಂದು ಏಕಾಏಕಿ ಪ್ರವಾಸಕ್ಕೆ ಬಂದಿದ್ದ ಮುರಳೀಕೃಷ್ಣ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಹೊಟ್ಟೆಯ ಭಾಗಕ್ಕೆ ಕಾಡಾನೆ ಕಾಲಿನಿಂದ ತುಳಿದಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆ ತರುವ ಸಂದರ್ಭ ಮಾರ್ಗ ಮಧ್ಯೆ ಮುರಳೀಕೃಷ್ಣ ಮೃತಪಟ್ಟಿದ್ದಾರೆ.





