ಲಾವಣ್ಯ ಹತ್ಯೆ ಪ್ರಕರಣ-ಉಪ್ಪಿನಂಗಡಿಯಿಂದ ಕತ್ತಿ ಖರೀದಿಸಿದ್ದ ಆರೋಪಿ: ಕತ್ತಿ ಖರೀದಿಸಿದ್ದ ಅಂಗಡಿಯಲ್ಲಿ ಮಹಜರು ನಡೆಸಿದ ಪೊಲೀಸರು
ಉಪ್ಪಿನಂಗಡಿ: ಜುಲೈ 16 ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಹತ್ಯೆ ಮಾಡಿದ್ದ ಆರೋಪಿಯು ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ, ಈ ಹಿನ್ನೆಲೆ ಉಪ್ಪಿನಂಗಡಿಯಲ್ಲಿ ಬುಧವಾರದಂದು ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು.
ಲಾವಣ್ಯಳನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದ್ದು, ಪೂರಕವಾಗಿ ಜುಲೈ 15 ರಂದೇ ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರು ಬಳಕೆಗೆ ಬೇಕಾಗುವ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. ಬಳಿಕ ಅಲ್ಲಿದ ಹೋರ ಹೋಗಿ ಬೇರೆಲ್ಲೋ ವಿಚಾರಿಸಲು ಯತ್ನಿಸಿ ಮರಳಿ ಅದೇ ಮಳಿಗೆಗೆ ಬಂದು ಕತ್ತಿಯನ್ನು ಖರೀದಿಸಿದ್ದ.
ಕಾಗದದಿಂದ ಸುತ್ತುವರೆದು ಪ್ಯಾಕ್ ಮಾಡಲಾದ ಕತ್ತಿಯನ್ನು ಅಲ್ಲೇ ಸ್ವಲ್ಪ ಹೊತ್ತು ಇರಿಸಿ ಹೊರ ಹೋದಾತ ಬಳಿಕ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿರುವ ದೃಶ್ಯಾವಳಿಗಳು ಸಿಸಿ ಕ್ಯಾಮಾರದ ಸಂಗ್ರಹದಲ್ಲಿ ಗೋಚರಿಸಿದೆ. ಈ ಬಗ್ಗೆ ತನಿಖಾಧಿಕಾರಿಗಳು ಆರೋಪಿ ಚೇತನ್ ನ ಮುಖವನ್ನು ಕಪ್ಪು ಬಟ್ಟೆಯಿಂದ ಮರೆಮಾಚಿ ಸ್ಥಳಕ್ಕೆ ಕರೆ ತಂದಿದ್ದು, ಮಹಜರು ಪ್ರಕ್ರಿಯೆಯನ್ನು ನಡೆಸಿದರು ಎಂದು ತಿಳಿದುಬಂದಿದೆ.




