July 29, 2026

ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕ ರಸ್ತೆ ತಡೆದ ಆರೋಪ: ಅರುಣ್ ಕುಮಾರ್ ಪುತ್ತಿಲ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

0
image_editor_output_image1038245537-1785338749378

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ–ಶಾಂತಿಗೋಡು ಆನಡ್ಕ ಸಂಪರ್ಕ ರಸ್ತೆಯ ಮಾಯಂಗಳ ಎಂಬಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕ ರಸ್ತೆ ತಡೆ ನಡೆಸಿದ ಆರೋಪದಡಿ ಹಲವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 27ರಂದು ಬೆಳಿಗ್ಗೆ ಕೆಲವರು ಗುಂಪು ಸೇರಿ ರಸ್ತೆ ತಡೆ ನಡೆಸಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ. ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಅರುಣ್ ಕುಮಾರ್ ಪುತ್ತಿಲ, ಮನೀಶ್ ಕುಲಾಲ್, ಅವಿನಾಶ್ ಜೋಗಿ, ಪ್ರೇಮರಾಜ್, ಪ್ರತೀಕ್ ಪುತ್ತಿಲ, ಶ್ರೀರಾಂ ಪಾತಾಳ, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ರವಿಕುಮಾರ್ ರೈ, ಜಗದೀಶ್ ರೈ, ಪ್ರಶಾಂತ್ ನೆಕ್ಕಿಲಾಡಿ ಸೇರಿದಂತೆ ಸುಮಾರು 25 ರಿಂದ 30 ಮಂದಿ ಯಾವುದೇ ಪೂರ್ವಾನುಮತಿ ಪಡೆಯದೇ ರಸ್ತೆ ತಡೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026ರಡಿ ಬಿಎನ್‌ಎಸ್-2023ರ ಕಲಂ 189(2) ಹಾಗೂ 126(2) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!