September 17, 2026

ವಿಟ್ಲದ ಚಂದಳಿಕೆ ಟರ್ಫ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕ್ರಿಕೆಟ್ ಆಡಿದ ಬೆನ್ನಲ್ಲೇ ಬಹರೈನ್ ಉದ್ಯೋಗಿ ಹೃದಯಾಘಾತದಿಂದ ನಿಧನ

0
image_editor_output_image-368990146-1785172368197

ವಿಟ್ಲ: ಬಹರೈನ್‌ನಿಂದ ವಾರದ ಹಿಂದಷ್ಟೇ ಸ್ವಗ್ರಾಮಕ್ಕೆ ಆಗಮಿಸಿದ್ದ ಕೇಪು ಗ್ರಾಮದ ಬೆಂಗೋಡಿ ನಿವಾಸಿ ದಿವಾಕರ ಶೆಟ್ಟಿ (52) ಅವರು ಭಾನುವಾರ ರಾತ್ರಿ ಕ್ರಿಕೆಟ್ ಆಡಿದ ಬೆನ್ನಲ್ಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ದಿವಾಕರ ಶೆಟ್ಟಿ ಅವರು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬೆಂಗೋಡಿ ಸೀತಾರಾಮ ಶೆಟ್ಟಿ ಹಾಗೂ ಪುಷ್ಪಾವತಿ ದಂಪತಿಯ ಪುತ್ರರಾಗಿದ್ದು, ಬಹರೈನ್‌ನ ಖಾಸಗಿ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿದ್ದರು. ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಅವರು ವಾರದ ಹಿಂದಷ್ಟೇ ರಜೆಯ ನಿಮಿತ್ತ ಊರಿಗೆ ಬಂದಿದ್ದರು.
ಭಾನುವಾರ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ವಿಟ್ಲ ಹೊರವಲಯದ ಚಂದಳಿಕೆಯಲ್ಲಿರುವ ಡ್ರೀಮ್ ಸ್ಪೋರ್ಟ್ಸ್ ಕ್ಲಬ್ ನ ಒಳಾಂಗಣ ಟರ್ಫ್ ಮೈದಾನದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಕ್ರಿಕೆಟ್ ಆಡಿದ್ದರು. ಆಟ ಮುಗಿಸಿ ಮನೆಗೆ ತೆರಳಲು ಸಜ್ಜಾಗುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣವೇ ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಆದರೆ ಪುತ್ತೂರಿನ ಆಸ್ಪತ್ರೆಗೆ ತಲುಪಿಸಿ ಪರೀಕ್ಷಿಸುವಷ್ಟರಲ್ಲೇ ದಿವಾಕರ ಶೆಟ್ಟಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ದಿವಾಕರ ಶೆಟ್ಟಿ ಅವರ ಅಕಾಲಿಕ ನಿಧನ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ಮೃತರು ಪತ್ನಿ, ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!