ವಿಟ್ಲ ಪೇಟೆ ಅಗಲೀಕರಣ ವಿಚಾರ: ವಿಟ್ಲ ಪೇಟೆ ಉಳಿಸಬೇಕೆಂದು ದೈವ ದೇವರಲ್ಲಿ ಉದ್ಯಮಿಗಳ ಮೊರೆ
ವಿಟ್ಲ ವಿಟ್ಲ ಪೇಟೆ ಉಳಿಸಿ ಹೋರಾಟ ಆರಂಭಿಸುವ ಸಲುವಾಗಿ ಜು.24ರಂದು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಸಂಜೆ ಕಡಂಬು ಕಲ್ಕುಡ ಕಲ್ಲುರ್ಟಿ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉದ್ಯಮಿಗಳಾದ ಎಚ್.ಜಗನ್ನಾಥ ಸಾಲ್ಯಾನ್, ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ, ಪ್ರಭಾಕರ ಶೆಟ್ಟಿ ದಂಬೆಕಾನ, ರಾಮದಾಸ ಶೆಣೈ, ಬಾಬು ಕೊಪ್ಪಳ ಮತ್ತು ವಿಟ್ಲ ಪೇಟೆಯ ವ್ಯಾಪಾರಿಗಳು ಉಪಸ್ಥಿತರಿದ್ದರು.
ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ವಿಟ್ಲ ಪೇಟೆ ಅಭಿವೃದ್ಧಿಗಾಗಿ ಸಾಧಕ ಬಾಧಕ ಚರ್ಚಿಸಲು ಕರೆದ ಸಭೆಯಲ್ಲಿ ವಿಟ್ಲ ಪೇಟೆ ವಿಸ್ತರಣೆ ಮಾಡುವುದಕ್ಕೆ ಸಹಕಾರ ಕೊಡಬೇಕು ಎಂಬ ವಿನಂತಿಗೆ ಅಸಮಾಧಾನ ತೋರಿದ ವ್ಯಾಪಾರಿಗಳು ಇದೀಗ ವಿಭಿನ್ನ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ. ಶಾಸಕರ ನೇತೃತ್ವದ ಸಭೆಯಲ್ಲಿ ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘವು ಪೇಟೆ ರಸ್ತೆ ವಿಸ್ತರಣೆ ಮಾಡುವ ಬದಲಾಗಿ ಬೈಪಾಸ್ ರಸ್ತೆ ಮಾಡಬೇಕೆಂದು ಹೇಳಿದ್ದನ್ನು ನೆನಪಿಸಬಹುದಾಗಿದೆ.




