ಧರ್ಮಸ್ಥಳ: ವೃದ್ಧೆಗೆ ಮತ್ತು ಬರಿಸುವ ಪಾನೀಯ ನೀಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು
ಧರ್ಮಸ್ಥಳ : ಇಲ್ಲಿನ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ವೃದ್ಧೆಯೊಬ್ಬರಿಗೆ ಮತ್ತು ಬರಿಸುವ ಪಾನೀಯ ನೀಡಿ ಅಸ್ವಸ್ಥಗೊಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಮೇ 25 ರಂದು ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ನಿವಾಸಿ ಶ್ರೀಮತಿ ಪ್ರೇಮಾ ಕೆ (70) ಎಂಬುವರೇ ದರೋಡೆಗೊಳಗಾದ ದುರ್ದೈವಿ. ಇವರಿಂದ 112 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 7,000/- ರೂಪಾಯಿ ನಗದನ್ನು ಕಳವು ಮಾಡಲಾಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 10,00,700/- ರೂಪಾಯಿ ಎಂದು ಅಂದಾಜಿಸಲಾಗಿದೆ.
ದಿನಾಂಕ 25-05-2026 ರಂದು ಮಧ್ಯಾಹ್ನ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಪ್ರೇಮಾ ಅವರು ದೇವರ ದರ್ಶನ ಮುಗಿಸಿದ್ದರು. ರಾತ್ರಿ ವಾಪಾಸು ಬೆಂಗಳೂರಿಗೆ ಹೋಗುವ ಸಲುವಾಗಿ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದಲ್ಲಿರುವ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದರು.
ಈ ವೇಳೆ ಅವರ ಬಳಿ ಬಂದು ಕುಳಿತ ಅಪರಿಚಿತ ವ್ಯಕ್ತಿಯೊಬ್ಬ ಅಜ್ಜಿಯ ಜೊತೆ ಅತ್ಯಂತ ಆತ್ಮೀಯವಾಗಿ ಮಾತನಾಡಿದ್ದಾನೆ. ಬಳಿಕ ತಾನು ತಂದಿದ್ದ ದೇವರ ಪ್ರಸಾದ ಹಾಗೂ ಕುಡಿಯಲು ಜ್ಯೂಸ್ ನೀಡಿದ್ದಾನೆ.





