May 13, 2026

ಟ್ರಕ್ಕಿಂಗ್ ಗೆ ತೆರಳಿದ್ದ ವೇಳೆ ಸಿಡಿಲು ಬಡಿದು ನಾಲ್ವರು ಯುವಕರು ಸಾವು

0
image_editor_output_image1678717743-1778664816971.jpg

ಕೇರಳ: ಮಂಜಿನ ಮುಸುಕಿನ ನಡುವೆ ಪ್ರಕೃತಿಯ ಸೌಂದರ್ಯ ಸವಿಯಲು ಹೋದ ವೆಲ್ಲಿಲಾ ಗ್ರಾಮದ ಯುವ ಸ್ನೇಹಿತರ ಗುಂಪಿಗೆ ಕುರಂಗಂಚೋಳದ ಬೆಟ್ಟದ ತುದಿಯಲ್ಲಿ ಯಮಪಾಶ ಕಾದಿತ್ತು.

ಮಂಗಳವಾರ ಸಂಜೆ ಸಂಭವಿಸಿದ ಭೀಕರ ಸಿಡಿಲು ಬಡಿತಕ್ಕೆ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ವೆಲ್ಲಿಲಾ ಗ್ರಾಮದ ಆಪ್ತ ಸ್ನೇಹಿತರಾದ ರಹೀಸ್, ಬಹಾಸ್, ಸಿಯಾದ್ ಮತ್ತು ಫಹಾದ್ ಮೃತಪಟ್ಟ ದುರ್ದೈವಿಗಳು. ಇವರೊಂದಿಗೆ ಇದ್ದ ರೋಷನ್ ಮತ್ತು ಇಶಾತ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಸದಸ್ಯರ ಈ ಗುಂಪು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಂಕಡ ಬಳಿಯ ಕುರಂಗಂಚೋಳ ವೀಕ್ಷಣಾ ತಾಣಕ್ಕೆ ಭೇಟಿ ನೀಡಿತ್ತು.

ಸಂಜೆ ವೇಳೆ ಹಠಾತ್ತನೆ ಮಳೆ ತೀವ್ರಗೊಂಡಾಗ, ಯುವಕರು ರಕ್ಷಣೆಗಾಗಿ ಬೆಟ್ಟದ ತುದಿಯಲ್ಲಿದ್ದ ಒಂಟಿ ಮರದ ಕೆಳಗೆ ನಿಂತಿದ್ದರು. ಇದೇ ವೇಳೆ ಬಿರುಗಾಳಿ ಸಹಿತ ಭಾರಿ ಸಿಡಿಲು ಬಡಿದಿದ್ದು, ಮರದ ಕೆಳಗೆ ನಿಂತಿದ್ದವರೆಲ್ಲರೂ ನೆಲಕ್ಕೆ ಅಪ್ಪಳಿಸಿದ್ದಾರೆ. ಬೆಟ್ಟದ ಕೆಳಗಿದ್ದ ಸ್ಥಳೀಯರು ಮತ್ತು ಇತರ ಸಂದರ್ಶಕರು ಕೂಡಲೇ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ, ನಾಲ್ವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಕುರಂಗಂಚೋಳವು ಇತ್ತೀಚಿನ ವರ್ಷಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಅತ್ಯಂತ ಜನಪ್ರಿಯ ತಾಣವಾಗಿ ಬೆಳೆಯುತ್ತಿತ್ತು. ಮಿನಿ ಊಟಿಯಂತೆ ಕಂಗೊಳಿಸುವ ಈ ಪ್ರದೇಶಕ್ಕೆ ನೆರೆಯ ಗ್ರಾಮಗಳ ಯುವಕರು ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಆದರೆ, ಮಂಗಳವಾರದ ಈ ದುರಂತವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಬೆಟ್ಟದ ತುದಿಯು ತೆರೆದ ಪ್ರದೇಶವಾಗಿದ್ದು, ಅಲ್ಲಿ ಮರದ ಕೆಳಗೆ ಆಶ್ರಯ ಪಡೆದದ್ದು ಅಪಾಯಕ್ಕೆ ಕಾರಣವಾಗಿರಬಹುದು” ಎಂದು ಸ್ಥಳೀಯ ನಿವಾಸಿಗಳು ಕಂಬನಿ ಮಿಡಿದಿದ್ದಾರೆ. ಪ್ರಕೃತಿಯ ವಿಕೋಪಕ್ಕೆ ಹಚ್ಚಹಸಿರ ಬೆಟ್ಟದ ಮೇಲೆ ರಕ್ತದ ಕಲೆಗಳು ಮೂಡಿರುವುದು ಸಾಹಸ ಪ್ರಿಯರಲ್ಲಿ ನಡುಕ ಹುಟ್ಟಿಸಿದೆ.

Leave a Reply

Your email address will not be published. Required fields are marked *

error: Content is protected !!