ವಿಟ್ಲ: ಅಭಿವೃದ್ಧಿ ಶುಲ್ಕ ಹೆಸರಿನಲ್ಲಿ ವಿಟ್ಲ ಪ.ಪಂ ನಿಂದ ಜನರಿಂದ ಲೂಟಿ: ಸಮಸ್ಯೆ ಸರಿಪಡಿಸದಿದ್ದಲ್ಲಿ ಪಂಚಾಯತ್ ವಿರುದ್ಧ ಪ್ರತಿಭಟನೆ
ವಿಟ್ಲ: ಬಿಜೆಪಿ ನೇತೃತ್ವದ ವಿಟ್ಲ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಖಾತಾ ಮಾಡುವ ಸಂದರ್ಭದಲ್ಲಿ ಏಕ ನಿವೇಶನ ನಕ್ಷೆ ಅನುಮೋದನೆ ಗೆ ಹೆಚ್ಚುವರಿ ಅಭಿವೃದ್ಧಿ ಶುಲ್ಕ ಹಾಗೂ ತ್ಯಾಜ್ಯ ಸಂಗ್ರಹಣಾ ಶುಲ್ಕ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದ್ದು ಇದರ
ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ವಿಟ್ಲ ಪಟ್ಟಣ ಪಂಚಾಯಿತಿ ಪ್ರತಿಪಕ್ಷ ನಾಯಕ ಕಾಂಗ್ರೆಸ್ ಮುಖಂಡ ವಿಕೆಎಂ ಆಶ್ರಫ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸದಸ್ಯರೊಳಗಣ ಬಣ ರಾಜಕೀಯಕ್ಕೆ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಜನರು ಅಭಿವೃದ್ಧಿ ಶುಲ್ಕದ ಭಯ ಮತ್ತು ಆತಂಕದಿಂದ ದಿನ ಕಳೆಯುವಂತಾಗಿ ಎಂದು ದೂರಿದರು.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಪಟ್ಟಣ ಪಂಚಾಯತಿಗಳಲ್ಲಿ ಇಲ್ಲದ ಕಾನೂನುಗಳನ್ನು ಮತ್ತು ತೆರಿಗೆಯನ್ನು ವಿಟ್ಲ ಪಟ್ಟಣ ಪಂಚಾಯತಿಯ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯವರು ಜನ ಸಾಮಾನ್ಯರಿಗೆ ವಿಧಿಸುವ ಮೂಲಕವಾಗಿ ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ. ಈ ಜನ ವಿರೋಧಿ ಕಾನೂನು ಮತ್ತು ಅಧಿಕ ತೆರಿಗೆ ವಿಧಿಸಿರುವುದನ್ನು ಹಿಂದಕ್ಕೆ ಪಡೆದು ಇತರ ಪಟ್ಟಣ ಪಂಚಾಯಿತಿ ನಲ್ಲಿ ಇರುವ ತೆರಿಗೆ ಮತ್ತು ಕಾನೂನುಗಳನ್ನೇ ವಿಟ್ಲದಲ್ಲಿಯೂ ಜಾರಿ ಮಾಡುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಇಲ್ಲದಿದ್ದಲ್ಲಿ ಮೇ 14ರಂದು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದಲ್ಲಿ ಸಾರ್ವಜನಿಕರನ್ನು ಸೇರಿಸಿ ಜನ ವಿರೋಧಿ ಕಾನೂನು ಮತ್ತು ಜನ ವಿರೋಧಿ ತೆರಿಗೆಯ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಈ ಮೂಲಕ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಆಶ್ರಫ್ ಅವರು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳದೇ ಪಟ್ಟಣ ಪಂಚಾಯಿತಿ ತೆರಿಗೆ ವಸೂಲಿ ಮಾಡುತ್ತಿದ್ದ ಕಾರಣ ಪಟ್ಟಣ ಪಂಚಾಯತಿಗೆ ಬೈಲಾ ತಯಾರಿಸಲು ನಿರ್ಧರಿಸಿ ಸಮಿತಿ ರಚಿಸಲಾಯಿತು. ಬಿಜೆಪಿ ಅವರ ಬಣ ರಾಜಕೀಯದಿಂದ ಬೈಲಾ ರಚನೆ ಮಾಡಲಾಗಲಿಲ್ಲ. ಅವರ ಈ ಗುಂಪುಗಾರಿಕೆಯಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಜನರು ಬೇಕಾಬಿಟ್ಟಿ ಶುಲ್ಕಗಳಿಂದ ಹೈರಾಣಾಗಿದ್ದಾರೆ ಎಂದ ಅವರು ಪಟ್ಟಣ ಪಂಚಾಯಿತಿ ಅಭಿವೃದ್ಧಿ ಬಗ್ಗೆ ಆಡಳಿತ ಪಕ್ಷ ಗಮನ ಕೇಂದ್ರೀಕರಿಸಲಿ ಎಂದು ಆಶ್ರಫ್ ಆಗ್ರಹಿಸಿದರು.
ಸದಸ್ಯ ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ ಮಾತನಾಡಿ
6ಸೆಂಟ್ಸ್ ಜಾಗಕ್ಕೆ ಅಭಿವೃದ್ಧಿಗೆ ಶುಲ್ಕವಾಗಿ 1.47ಲಕ್ಷ ರೂ. ವಿಧಿಸಲಾಗಿದೆ. ಈಗಾಗಲೇ ಪುತ್ತೂರು ನಗರ ಯೋಜನಾ ಪ್ರಾಧಿಕಾರ ಕ್ಕೆ 18,000 ರೂ. ಕಟ್ಟಲಾಗಿದೆ ಕೆಲವರಿಗೆ 3ಲಕ್ಷ ರೂ. ವರೆಗೆ ಬಂದಿದ್ದು, ದಾಖಲೆಯಿದೆ ಇದು ಜನಸಾಮಾನ್ಯರ ಸುಲಿಗೆ ಎಂದು ಆರೋಪ ಮಾಡಿದ
ಜನರಿಗೆ ತೊಂದರೆಯಾಗುವಾಗ ಪಕ್ಷ, ಮತ, ಬಣ ಬಿಟ್ಟು ಮಾತಾಡಬೇಕು. ಜನರಿಂದ ಆಯ್ಕೆಯಾದ ಸದಸ್ಯರು ಸಮಸ್ಯೆ ಬಂದಾಗ ಜನರ ಜತೆ ಸ್ಪಂದಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಪ್ರತಿಪಕ್ಷ ಸದಸ್ಯರಾದ ಶ್ರೀನಿವಾಸ ಶೆಟ್ಟಿ ಕೊಲ್ಯ
ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ,
ಲತಾ ಅಶೋಕ್ ಮತ್ತು
ಪದ್ಮಿನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





