ಪತ್ನಿ, ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಅಡ್ಡಬಿದ್ದು ಆತ್ಮಹತ್ಯೆ
ತಿರುಪತಿ: ತಿರುಪತಿ ಜಿಲ್ಲೆಯ ನಾರಾಯಣವನಂ ಮಂಡಲದ ವೆಂಕಟಕೃಷ್ಣ ಪಾಲೆಂನಲ್ಲಿ ಬುಧವಾರ ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ಅಡ್ಡಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೋಪಿ ಮೋಹನ್ ತನ್ನ ಪತ್ನಿ ಹರಿತಾ (33) ಹಾಗೂ ತಾಯಿ ಚಂದ್ರಕಲಾ (65) ಅವರನ್ನು ಮನೆಯಲ್ಲೇ ಕೊಂದಿದ್ದಾನೆ. ಬಳಿಕ ತಿರುಪತಿಯ ಪುತ್ತೂರಿನ ಶಾಲೆಯಲ್ಲಿದ್ದ ಮಗ ಕೌಶಿಕ್ (14) ಮತ್ತು ಮಗಳು ಹರಿಣಿ (12) ಅವರನ್ನು ಸುಳ್ಳು ಹೇಳಿ ಶಾಲೆಯಿಂದ ಕರೆದೊಯ್ದಿದ್ದಾನೆ.
ಮಕ್ಕಳನ್ನು ಕರೆದುಕೊಂಡು ಜಿಲ್ಲೆಯಾದ್ಯಂತ ಸುತ್ತಾಡಿದ ಮೋಹನ್, ಸಂಜೆ 7:15ರ ಸುಮಾರಿಗೆ ವೇಪಗುಂಟ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಮಲಗಿದ್ದಾನೆ. ತಂದೆಯನ್ನು ರಕ್ಷಿಸಲು ಹೋದ ಇಬ್ಬರು ಮಕ್ಕಳು ಕೂಡ ಎಗ್ಮೋರ್-ಕಾಚೆಗುಡ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ನಜ್ಜುಗುಜ್ಜಾಗಿದ್ದಾರೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಮೋಹನ್ ಈ ಕೃತ್ಯ ಎಸಗಿರುವುದು ಪೊಲೀಸರಿಗೆ ನಿಗೂಢವಾಗಿ ಉಳಿದಿದೆ.
ಮೋಹನ್ ಪತ್ನಿಯ ಸಹೋದರ ಬಾಲಕೃಷ್ಣ ಮನೆಗೆ ಹೋದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಾರಾಯಣವನಂ ಹಾಗೂ ರೈಲ್ವೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.





