ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ನೀರುಪಾಲು
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಎಎಸ್ಆರ್ ಜಿಲ್ಲೆಯ ಅರಕು ಕಣಿವೆಯ ಮಲ್ಲುಗುಮ್ಮಿ ಪ್ರದೇಶದಲ್ಲಿ ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗುರುವಾರ ಸಂಭವಿಸಿದ ಈ ಘಟನೆಯಲ್ಲಿ ಮತ್ತೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಕುಂಪೇಟ ಮಂಡಲದ ಜಂಬುವಲಸ ಗ್ರಾಮದ ಎಸ್. ಪವಿತ್ರಾ (15), ಎಸ್. ರತ್ನಕುಮಾರಿ (16) ಮತ್ತು ಎಸ್. ತ್ರಿಶಾ (17) ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ತಮ್ಮ ಸ್ನೇಹಿತೆ ಎಸ್. ಅಂಜಲಿ ಜೊತೆ ಜಲಪಾತ ವೀಕ್ಷಿಸಲು ತೆರಳಿದ್ದರು. ಮೂವರು ಯುವತಿಯರು ಜಲಪಾತದ ನೀರಿನಲ್ಲಿ ಆಟವಾಡುತ್ತಿದ್ದರು. ಏಕಾಏಕಿ ಒಬ್ಬಾರದ ಮೇಲೆ ಒಬ್ಬರಂತೆ ನೀರಿನಲ್ಲಿ ಮುಳುಗಿದ್ದಾರೆ. ಮತ್ತೊಬ್ಬ ಸ್ನೇಹಿತೆ ಬಂಡೆ ಮೇಲೆ ನಿಂತು ಅವರ ಆಟದ ವಿಡಿಯೋ ತೆಗೆಯುತ್ತಿದ್ದಳು.
ಸ್ಥಳೀಯರು ತಕ್ಷಣವೇ ಧಾವಿಸಿ ಮೂವರ ಶವಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವೈಎಸ್ಆರ್ಸಿಪಿ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದು, ಇಂತಹ ದುರಂತಗಳು ಮರುಕಳಿಸದಂತೆ ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.




