ಮಂಡ್ಯ: ರಾಸಾಯನಿಕವಿದ್ದ ಬೃಹತ್ ಟ್ಯಾಂಕ್ ಸ್ಫೋಟ: ಇಬ್ಬರು ಕಾರ್ಮಿಕರು ಸಾವು, ಮೂವರು ಗಂಭೀರ
ಮಂಡ್ಯ : ರಾಸಾಯನಿಕವಿದ್ದ ಬೃಹತ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ತಾಲೂಕಿನ ಬಸರಾಳು ಬಳಿಯ ಕಾರೇಕಟ್ಟೆ ಗ್ರಾಮದ ಬಳಿ ಕೆಮಿಕಲ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಅವಘಡದಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು ಅವರ ದೇಹಗಳು ಛಿದ್ರ ಛಿದ್ರವಾಗಿದೆ.ಸ್ಥಳದಲ್ಲಿದ್ದ ಮೂವರು ಗಂಭೀರವಾಗಿದ್ದು ಓರ್ವನ ಕೈ ತುಂಡಾಗಿದೆ. ಸದ್ಯ ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಘಟನೆ ನಡೆದ ಬಳಿಕ ಕಾರ್ಖಾನೆಯವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಹಿಂದೆ ಈ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಯನ್ನು ಸ್ಥಾಪಿಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು ಅನ್ನುವ ವಿಚಾರವೂ ಕೂಡ ಈ ವೇಳೆ ಬೆಳಕಿಗೆ ಬಂದಿದೆ




