ಸ್ಪಿರಿಟ್ ಕುಡಿದು ಇಬ್ಬರು ಯುವಕರು ಸಾವು
ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರಿಟ್ ಕುಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಮೃತಪಟ್ಟಿದ್ದು, ಶರಣಪ್ಪ ಹಂಚಿನಾಳ ಎಂಬವನ ಸ್ಥಿತಿ ಚಿಂತಾಜನಕವಾಗಿದೆ. ಮೃತ ಅಮರಯ್ಯ ಜೆಸ್ಕಾಂ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ರಮೇಶ ಹೊಸಹಳ್ಳಿ ತಂದೆ – ತಾಯಿಗೆ ಒಬ್ಬನೇ ಮಗನಾಗಿದ್ದ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಜೊತೆಗೆ ರಾತ್ರಿ ಊಟ ಮಾಡಿದ್ದ ಮತ್ತು ಎಲ್ಲರಿಗೂ ಸ್ಪಿರಿಟ್ ಕುಡಿಸಿದ್ದ ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.




