ತಂದೆಗೆ ಯಾವುದೇ ರೀತಿಯ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ: ಚೈತ್ರಾ ಕುಂದಾಪುರಗೆ ಕೋರ್ಟ್ ನಿರ್ದೇಶನ
ಕುಂದಾಪುರ: ಬಿಗ್ಬಾಸ್ ಸ್ಪರ್ಧಿ ಚೈತ್ರ ಕುಂದಾಪುರ ಅವರಿಗೆ ತಂದೆಗೆ ಕಿರುಕುಳ ನೀಡದಂತೆ ಕುಂದಾಪುರದ ನ್ಯಾಯಾಲಯವು ನಿರ್ದೇಶನವನ್ನು ನೀಡಿದ್ದು, ಈ ಮೂಲಕ ಈ ಕೌಟುಂಬಿಕ ವಿವಾದವು ಸಾರ್ವಜನಿಕರ ಗಮನ ಸೆಳೆದಿದೆ.
ಕುಂದಾಪುರ ತಾಲೂಕಿನ ಚಿಕ್ಕನ್ಸಾಲ್ ರಸ್ತೆಯ ಬಾಲಕೃಷ್ಣ ನಾಯ್ಕ(71), ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯ್ದೆ 2007ರಡಿ ಪರಿಹಾರ ಕೋರಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಅವರ ತಂದೆ ರಕ್ಷಣೆ ಮತ್ತು ಪರಿಹಾರ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಈ ಆದೇಶವನ್ನು ಅಂಗೀಕರಿಸಲಾಗಿದೆ. ಅರ್ಜಿಗಳನ್ನು ಪರಿಗಣಿಸಿದ ನ್ಯಾಯಾಲಯವು, ಅವರಿಗೆ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಬಾರದು ಎಂದು ಸೂಚನೆ ನೀಡಿದೆ ಮತ್ತು ಎಲ್ಲಾ ಸಮಯದಲ್ಲೂ ಅವರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸಬೇಕು ಎಂದು ಒತ್ತಿ ಹೇಳಿದೆ.
ಪತ್ನಿ ಹಾಗೂ ಮಗಳು ಚೈತ್ರಾ ಸೇರಿಕೊಂಡು ಮನೆಯ ದಾಖಲೆಗಳನ್ನು ಅವರ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದು, ಬಾಲಕೃಷ್ಣ ನಾಯ್ಕ ಇದನ್ನು ನಿರಾಕರಿಸಿದ ಕಾರಣ ಚೈತ್ರಾ ತನ್ನ ತಾಯಿ ಹಾಗೂ ಸಹಚರರೊಂದಿಗೆ ಸೇರಿಕೊಂಡು ತನ್ನ ಅಕ್ರಮ ವ್ಯವಹಾರಗಳನ್ನು ಬಯಲು ಮಾಡಿದಲ್ಲಿ ಬಾಲಕೃಷ್ಣ ನಾಯ್ಕ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬೆದರಿಕೆಯಿಂದ ಬಾಲಕೃಷ್ಣ ನಾಯ್ಕ ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಹಿರಿಯ ಮಗಳನ್ನು ಭೇಟಿಯಾಗಲು ಆಗಾಗೆ ಊರಿಗೆ ಬರುತ್ತಿದ್ದರು. ಪ್ರಸ್ತುತ ಚೈತ್ರಾ ಹಾಗೂ ಆಕೆಯ ತಾಯಿ, ಬಾಲಕೃಷ್ಣ ನಾಯ್ಕ ಅವರಿಗೆ ಅವರ ಸ್ವಂತ ಮನೆಗೆ ಪ್ರವೇಶಿಸಲು ಅನುವು ಮಾಡದೆ, ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದಾಗಿ ದೂರಲಾಗಿದೆ.
ಚೈತ್ರಾ ವಿನಾಕಾರಣ ಸಾರ್ವಜನಿಕವಾಗಿ ಬಾಲಕೃಷ್ಣ ನಾಯ್ಕ ಅವರ ಮಾನ ಹಾನಿ ಮಾಡಿದ್ದು, ಈ ಬಗ್ಗೆ ಬಾಲಕೃಷ್ಣ ನಾಯ್ಕ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ದೂರು ದಾಖಲಿಸಿದ್ದರು. ಮನೆಯಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಮತ್ತು ಚೈತ್ರಾಳಿಂದ ಜೀವ ಮತ್ತು ಆಸ್ತಿಗೆ ರಕ್ಷಣೆ ಒದಗಿಸಬೇಕು. ಸಂಬಂಧಪಟ್ಟ ಆಸ್ತಿಯಿಂದ ಬರುವ ಬಾಡಿಗೆ ತನಗೆ ದೊರೆಯಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.





