ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ: ಇಬ್ಬರು ಕೊಲೆ ಆರೋಪಿಗಳಿಗೆ ಗುಂಡೇಟು
ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳಿಗೆ ಹುಬ್ಬಳ್ಳಿ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.
ಮಲ್ಲಿಕ್ ಜಾನ್ ಕೊಲೆಯ ಪ್ರಮುಖ ಆರೋಪಿಗಳಾದ ಬಾಲರಾಜ್ ಅಲಿಯಾಸ್ ಬಂಗಾರ ಬಾಲ್ಯ ಮತ್ತು ಮಹ್ಮದ್ ಶೇಖ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಈ ಇಬ್ಬರು ಸೇರಿ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನ.13ರ ರಾತ್ರಿ ಮಹಮ್ಮದ್ ಮಲ್ಲಿಕ್ ಜಾನ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದರು.
ಈ ಇಬ್ಬರು ಆರೋಪಿಗಳು ಸೆಟಲ್ಮೆಂಟ್ನ ಶ್ಯಾಮ್ ಜಾದವ್ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದರು.
ಎಂಡಿ ದಾವೂದ್ ಮತ್ತು ಶ್ಯಾಮ್ ಜಾದವ್ ಗುಂಪಿನ ನಡುವೆ ಆಗಾಗ ಗ್ಯಾಂಗ್ ವಾರ್ ನಡೆಯುತ್ತಿತ್ತು. ಅದರ ಮುಂದುವರಿದ ಭಾಗವಾಗಿ ಮಹಮ್ಮದ್ ಮಲಿಕ್ ಜಾನ್ ಹತ್ಯೆ ಮಾಡಲಾಗಿತ್ತು. ಪ್ರಕರಣದ ಇನ್ನುಳಿದ ಆರೋಪಿಗಳು ಇರುವ ಜಾಗ ತೋರಿಸುವುದಾಗಿ ಕರದುಕೊಂಡು ಹೋಗಿದ್ದ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.




