ವಿದ್ಯುತ್ ತಂತಿಗೆ ತಗುಲಿ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್: ಇಬ್ಬರು ಸಾವು
ಜೈಪುರ: ಕರ್ನೂಲ್ ದುರಂತ ಮಾಸುವ ಮುನ್ನವೇ ಇದೀಗ ಮತ್ತೊಂದು ಖಾಸಗಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿ ಇಬ್ಬರು ಸಾವನಪ್ಪಿದ ಘಟನೆ ಜೈಪುರ ಮನೋಹರ್ಪುರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಪಿಲಿಭಿತ್ನಿಂದ ಮನೋಹರ್ಪುರಕ್ಕೆ 50 ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮನೋಹರ್ಪುರದ ಹಳ್ಳಿಯ ಬಳಿಯ ಕಚ್ಚಾ ರಸ್ತೆಯಲ್ಲಿ ಹಾದುಹೋಗುವಾಗ, ಬಸ್ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗೃಹೋಪಯೋಗಿ ವಸ್ತುಗಳು, ಮೋಟಾರ್ಸೈಕಲ್ಗಳು ಮತ್ತು ಸೈಕಲ್ಗಳು ಹೈಟೆನ್ಷನ್ ಲೈನ್ಗೆ ತಗುಲಿ, ನಂತರ ಲೈವ್ ವೈರ್ ಅನ್ನು ಸ್ಪರ್ಶಿಸಿ ಬಸ್ಗೆ ಬೆಂಕಿ ಹೊತ್ತಿಕೊಂಡಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್ಪಾಲ್ ಸಿಂಗ್ ತಿಳಿಸಿದ್ದಾರೆ.
ಕೆಲವು ಗ್ಯಾಸ್ ಸಿಲಿಂಡರ್ಗಳನ್ನು ಸಹ ಬಸ್ನಲ್ಲಿ ಇಡಲಾಗಿತ್ತು. ಘಟನೆಯಲ್ಲಿ ಎರಡು ಗ್ಯಾಸ್ ಸಿಲಿಂಡರ್ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಜೈಪುರ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ, ಇಬ್ಬರು ಕಾರ್ಮಿಕರು ಬಸ್ಸಿನಿಂದ ಇಳಿದು ಚಾಲಕನಿಗೆ ತಂತಿಗಳ ಕೆಳಗೆ ನಿಧಾನವಾಗಿ ಚಲಿಸುವಂತೆ ಮಾರ್ಗದರ್ಶನ ನೀಡುತ್ತಿದ್ದರು ಆದರೆ ಬಸ್ಸಿನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ವಸ್ತುಗಳು ತಂತಿಯನ್ನು ಮುಟ್ಟಿದವು ಎಂದು ಹೇಳಿದರು.




