ಮುನಾವರ್ ಫಾರೂಕಿ ಕೊಲೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ
ನವದೆಹಲಿ: ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕೊಲೆಗೆ ಸಂಚು ರೂಪಿಸಿದ್ದ ಗೋಲ್ಡಿ ಬ್ರಾರ್ ಗುಂಪಿನ ಇಬ್ಬರು ಸದಸ್ಯರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಜೈತ್ಪುರ-ಕಾಳಿಂದಿ ಕುಂಜ್ ರಸ್ತೆಯಲ್ಲಿ ನಡೆದ ಗುಂಡಿನ ಚಕಮಕಿಯ ನಂತರ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಹರಿಯಾಣದ ಪಾಣಿಪತ್ ನಿವಾಸಿ ರಾಹುಲ್ ಮತ್ತು ಭಿವಾನಿಯ ಸಾಹಿಲ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಈ ಇಬ್ಬರೂ ಆರೋಪಿಗಳು ಫಾರೂಕಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿ ಗ್ಯಾಂಗ್ಸ್ಟರ್ ರೋಹಿತ್ ಗೋದಾರ ಅವರಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.




