ಪ್ರೀತಿಸುತ್ತಿದ್ದ ಯುವತಿಯ ಕೊಲೆ: ಆರೋಪಿಯ ಬಂಧನ, ಶವ ತುಂಬಿದ ಬ್ಯಾಗ್ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಸೂರಜ್ ಕುಮಾರ್
ಲಕ್ನೋ: ಇನ್ಸ್ಟಾಗ್ರಾಮ್ನಲ್ಲಿ ಅರಳಿದ ಪ್ರೀತಿ ಪ್ರಿಯತಮೆಯ ಭೀಕರ ಕೊಲೆಯಲ್ಲಿ ಕೊನೆಯಾದ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಆಕಾಂಕ್ಷಾ (20) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸೂರಜ್ ಕುಮಾರ್ ಉತ್ತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್ ಇನ್ ಸಂಬಂಧದಲ್ಲಿದ್ದರು.
ಯುವತಿಗೆ ಮತ್ತೊಬ್ಬನಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಆರೋಪಿ ಹತ್ಯೆಗೈದಿದ್ದಾನೆ. ಎರಡು ತಿಂಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜುಲೈ 21 ರಂದು ಯುವತಿ ಬೇರೊಬ್ಬನ ಜೊತೆ ಮಾತಾಡುತ್ತಿದ್ದಾಳೆ ಎಂದು ಆರೋಪಿ ಗಲಾಟೆ ಮಾಡಿದ್ದ. ಈ ವೇಳೆ ಆಕೆಯ ತಲೆಯನ್ನು ಗೋಡೆಗೆ ಅಪ್ಪಳಿಸಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದ. ನಂತರ ತನ್ನ ಸ್ನೇಹಿತ ಆಶಿಶ್ ಕುಮಾರ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಬಳಿಕ ಇಬ್ಬರು ಸೇರಿ ಆಕಾಂಕ್ಷಾಳ ಮೃತದೇಹವನ್ನು ಬ್ಯಾಗಿನಲ್ಲಿ ತುಂಬಿಸಿ 100 ಕಿ.ಮೀ ದೂರದಲ್ಲಿರುವ ಬಂಡಾಗೆ ಬೈಕ್ನಲ್ಲಿ ತೆರಳಿ ಯಮುನಾ ನದಿಗೆ ಎಸೆದಿದ್ದರು. ಇದಕ್ಕೂ ಮುನ್ನ ಸೂರಜ್ ಉತ್ತಮ್ ಶವ ತುಂಬಿದ ಬ್ಯಾಗ್ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.




