ಇಂದು ಉಪ ರಾಷ್ಟ್ರಪತಿ ಚುನಾವಣೆ: NDA ಮತ್ತು ಇಂಡಿಯಾ ಬಣದ ನಡುವೆ ತೀವ್ರ ಪೈಪೋಟಿ
ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜುಲೈ 21ರಂದು ದಿಢೀರ್ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಕಣದಲ್ಲಿರುವ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿಯವರ ನಡುವೆ ತುರುಸಿನ ಪೈಪೋಟಿ ದೇಶದ ಕುತೂಹಲ ಕೆರಳಿಸಿದೆ.
ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಮತದಾನ ಸಂಸತ್ ಭವನದಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಸಂಜೆ 6ಕ್ಕೆ ಆರಂಭವಾಗಲಿದೆ.
ಸಂಸದರನ್ನು ಒಳಗೊಂಡ ಇತರ ಎಲ್ಲ ಚುನಾವಣೆಗಳಂತೆ ಇಲ್ಲಿ ಪಕ್ಷಗಳು ವಿಪ್ ಜಾರಿಗೊಳಿಸುವಂತಿಲ್ಲ. ರಹಸ್ಯ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಬೇಕಾಗುತ್ತದೆ. ಪಕ್ಷದ ಯಾವುದೇ ಸೂಚನೆಗಳನ್ನು ಅನುಸರಿಸುವ ಅಗತ್ಯ ಇರುವುದಿಲ್ಲ.
ಒಟ್ಟು 542 ಮಂದಿ ಲೋಕಸಭಾ ಸದಸ್ಯರು ಹಾಗೂ 239 ರಾಜ್ಯಸಭಾ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಎನ್ಡಿಎ 427 ಹಾಗೂ ವಿರೋಧ ಪಕ್ಷಗಳು 354 ಸದಸ್ಯಬಲ ಹೊಂದಿವೆ.
ರಾಧಾಕೃಷ್ಣನ್ (76) ಮೂಲತ ತಮಿಳುನಾಡಿನ ಬಿಜೆಪಿ ಹಿರಿಯ ಮುಖಂಡರಾಗಿದ್ದರೆ, ರೆಡ್ಡಿ (79) ತೆಲಂಗಾಣದವರು ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದವರು.




