ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಯುವತಿ ಆತ್ಮಹತ್ಯೆ
ತುಮಕೂರು: ಮದುವೆಯಾದರೂ ಬೇರೆ ಯುವತಿಯೊಂದಿಗೆ ಪತಿ ಸಲುಗೆಯಿಂದ ಇದ್ದಿದ್ದಕ್ಕೆ ಮನನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ ಜ್ಯೋತಿನಗರದಲ್ಲಿ ನಡೆದಿದೆ.
ಪೃಥ್ವಿರಾಣಿ (20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಅದೇ ತಾಲೂಕಿನ ಪಕ್ಕದ ಊರಾದ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ವಿವಾಹವಾಗಿದ್ದರು.
ನಾಲ್ಕು ವರ್ಷದ ಪ್ರೀತಿಯ ಬಳಿಕ ನಾಲ್ಕು ತಿಂಗಳ ಹಿಂದೆ ಈ ಜೋಡಿ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದರು.
ಮದುವೆಯ ಬಳಿಕ ಶಿರಾ ಟೌನ್ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ನನ್ನ ಪ್ರೀತಿಸಿ ಬೇರೊಬ್ಬಳ ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಬೇರೊಂದು ಯುವತಿ ಬೆದರಿಕೆ ಹಾಕುತ್ತಿದ್ದಳು.
ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಈ ವೇಳೆ ಆಕೆ ಮೇಲೆ ಪತಿ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಪೃಥ್ವಿರಾಣಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ.
ಜೈಮಾರುತಿ ಪತ್ನಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಪೃಥ್ವಿರಾಣಿ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಳು. ಕುತ್ತಿಗೆಯಲ್ಲಿ ಕಪ್ಪು ಗುರುತು, ಮೂಗಿನಲ್ಲಿ ರಕ್ತ ಕಂಡು ಅನುಮಾನಗೊಂಡು ಕುಟುಂಬಸ್ಥರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಶಿರಾ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಇದೀಗ ಶಿರಾ ಪೊಲೀಸರು, ಪತಿಯ ಕಿರುಕುಳ ಆರೋಪ ಹಿನ್ನಲೆ ಜೈಮಾರುತಿಯನ್ನು ಬಂಧಿಸಿ ತನಿಖೆ ನಡೆಸತ್ತಿದ್ದಾರೆ.




