ಕಾಸರಗೋಡು: ಮನೆಯಿಂದ ಚಿನ್ನದ ಸರವನ್ನು ಕಳವು: ಕ್ಷಮೆಯಾಚನೆಯ ಪತ್ರದೊಂದಿಗೆ ಸರವನ್ನು ಮರಳಿಸಿದ ಭೂಪ
ಕಾಸರಗೋಡು: ಮನೆಯಿಂದ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಿದ್ದ ಕಳ್ಳನೊಬ್ಬ ವಾಟ್ಸಾಪ್ ನಲ್ಲಿ ಹರಿದಾಡಿದ ಸಂದೇಶವನ್ನು ನೋಡಿ ಮನ ಪರಿವರ್ತನೆಗೊಂಡು ಕದ್ದ ಚಿನ್ನದ ಮಾಂಗಲ್ಯ ಸರವನ್ನು ಕ್ಷಮೆಯಾಚನೆಯ ಪತ್ರದೊಂದಿಗೆ 9 ದಿನಗಳಲ್ಲಿ ಮರಳಿಸಿದ ಅತ್ಯಂತ ಅಪರೂಪದ ಘಟನೆಯೊಂದು ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಪೊಯಿನಾಚಿ ಎಂಬಲ್ಲಿನ ನಿವಾಸಿ ಪರಂಬ ಲಕ್ಷ್ಮಿ ನಿವಾಸದ ಎಂ. ಗೀತಾ ಎಂಬವರು ಆಗಸ್ಟ್ 4 ರಂದು ತನ್ನ ಪತಿ ನಿವೃತ್ತ ಕಂದಾಯ ಅಧಿಕಾರಿ ವಿ. ದಾಮೋದರನ್ ಜತೆ ಮನೆಯಿಂದ ಹೊರಗೆ ಹೋಗಿದ್ದು, ಸಂಜೆ ವೇಳೆಗೆ ಬಸ್ ನಲ್ಲಿ ಬಂದು ಮನೆಗೆ ಹಿಂದಿರುಗಿದಾಗ ಮನೆಯಲ್ಲಿದ್ದ ತನ್ನ ಮದುವೆ ಸಂದರ್ಭದ ಚಿನ್ನದ ಮಾಂಗಲ್ಯ ಸರ ಕಳವಾಗಿರುವುದು ಗಮನಕ್ಕೆ ಬಂದಿತ್ತು. ಹಾಗಾಗಿ ಅವರು ತತ್ ಕ್ಷಣ ಮೇಲ್ಪರಂಬ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಚಿನ್ನದ ಸರದ ಜತಗಿದ್ದ ಕೈಬರಹದ ಟಿಪ್ಪಣಿಯಲ್ಲಿ ಬರೆಯಲಾಗಿತ್ತು: ಹೀಗೆಂದು “ಈ ಚಿನ್ನದ ಸರ ನನ್ನ ವಶಕ್ಕೆ ಬಂದು ಒಂಬತ್ತು ದಿನಗಳಾಗಿವೆ. ಪ್ರಾರಂಭದಲ್ಲಿ ನಾನು ಸಂತೋಷ ಪಡುತ್ತಿದ್ದೆ. ಆದರೆ ನಾನು ಅದನ್ನು ಕೈಯಲ್ಲಿ ಹಿಡಿದಾಗಲೆಲ್ಲಾ, ನನಗೆ ಕೆಲವು ನಕಾರಾತ್ಮಕ ಭಾವನೆಗಳು ಮತ್ತು ಸ್ವಲ್ಪ ನಡುಕ ಬರುತ್ತಿತ್ತು. ಅದನ್ನು ಏನು ಮಾಡ ಬೇಕೆಂದು ನಾನು ಸುದೀರ್ಘವಾಗಿ ಮತ್ತು ಆಳವಾಗಿ ಆಲೋಚನೆ ಮಾಡಿದೆ. ಬಳಿಕ ವಾಟ್ಸಾಪ್ನಲ್ಲಿ ಅದು ಪೆಂಡೆಂಟ್ ಇರುವ ಮದುವೆಯ ಮಾಂಗಲ್ಯ ಸರ ಎಂಬ ಸಂದೇಶವನ್ನು ನೋಡಿದೆ. ಇದರಿಂದಾಗಿ ನಾನು ಯಾರಿಗೂ ನಷ್ಟವಾಗಬಾರದು ಎಂಬ ನಿರ್ಧಾರಕ್ಕೆ ಬಂದೆ. ನನ್ನ ಗುರುತನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಇಷ್ಟು ದಿನ ಇರಿಸಿಕೊಂಡಿದ್ದಕ್ಕಾಗಿ ಕ್ಷಮಿಸಿ’ ಬರೆದಿದ್ದಾರೆ.




