ಮಂಗಳೂರು: ಕೆಲಸಕ್ಕೆ ಹೋಗಿದ್ದ ದೇರಳಕಟ್ಟೆಯ ನಿಯಾಜ್ ನಾಪತ್ತೆ
ಮಂಗಳೂರು: ತಾಯಿಯಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯಿಂದ ಹೋಗಿದ್ದ ಯುವಕನೋರ್ವ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದೇರಳಕಟ್ಟೆಯ ಎಸ್ ಎನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ನಿಯಾಜ್ (33 ವರ್ಷ) ನಾಪತ್ತೆಯಾದ ಯುವಕ.
ನಿಯಾಜ್ ಆ.2ರಂದು ತನ್ನ ತಾಯಿ ಹಾಜಿರರವರಲ್ಲಿ ಬೆಂಗಳೂರಿನಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಅದೇ ದಿನ ಮಧ್ಯಾಹ್ನ ಆತನ ಹೆಂಡತಿ ಶಹಳಳಿಗೆ ಕರೆ ಮಾಡಿ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ನನ್ನ ತಂಗಿ ಮಗುವನ್ನು ನೋಡಲು ಹೋಗೋಣ ನೀನು ರೆಡಿಯಾಗಿರು ಎಂದು ತಿಳಿಸಿದ್ದಾರೆ.
ನಂತರ ಶಹಳ ಮತ್ತೆ ಮೊಹಮ್ಮದ್ ನಿಯಾಜ್ ನಿಗೆ ಫೋನ್ ಕರೆ ಮಾಡಿದಾಗ ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಮೊಹಮ್ಮದ್ ನಿಯಾಜ್ ತನ್ನ ಮನೆಗೂ ಬಾರದೆ, ಹೆಂಡತಿಯ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.




