ಜಾತ್ರೆ, ಸಮಾರಂಭಗಳಿದ್ದಾಗ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಸೆರೆ
ಬೆಂಗಳೂರು: ಜಾತ್ರೆ, ಸಮಾರಂಭಗಳಿದ್ದಾಗ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಯಶೋಧಾ, ಗಾಯತ್ರಿ, ಆಶಾ ಮತ್ತು ಪ್ರಿಯಾ ಬಂಧಿತ ಕಳ್ಳಿಯರು. ಜೂನ್ 29ರಂದು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಗನ್ನಾಥ ರಥಯಾತ್ರೆ ನಡೆದಿತ್ತು. ನೂಕುನುಗ್ಗಲು ಹೆಚ್ಚಿದ ಕಾರಣ ಕಳ್ಳಿಯರಿಗೆ ಕಳ್ಳತನಕ್ಕೆ ಹೆಚ್ಚು ಅನುಕೂಲವಾಗಿತ್ತು.
ಮಹಿಳೆಯರ ಚಿನ್ನದ ಸರ ಟಾರ್ಗೆಟ್ ಮಾಡಿದ್ದ ಐನಾತಿಗಳು 4 ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದರು. ಚಿನ್ನದ ಸರ ಕಳೆದುಕೊಂಡವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು 300ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 14 ಲಕ್ಷ ಮೌಲ್ಯದ 140 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.




