ಮಂಗಳೂರು: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮಧ್ಯೆ ಪ್ರವೇಶ: ಕಾರ್ಯಕರ್ತನನ್ನು ಹೊರಗಡೆ ಹಾಕಿ ಎಂದ ಸಚಿವ
ಮಂಗಳೂರು : ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುದ್ದಿಗೋಷ್ಠಿ ವೇಳೆ ವಾಗ್ವಾದ ನಡೆದಿದೆ. ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ರಹಿಮಾನ್ ಕೊಲೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಕಮೆಂಟ್ಗಳೇ ಕಾರಣ ಎಂದು ಪತ್ರಕರ್ತರು ಕೇಳಿದಾಗ, ದಿನೇಶ್ ಗುಂಡೂರಾವ್ ಉತ್ತರಿಸುವಾಗ ತಡೆದ ಅಲ್ಲಿಯೇ ನಿಂತಿದ್ದ ಕಾಂಗ್ರೆಸ್ ಮುಖಂಡ ಉಸ್ಮಾನ್ ಕಲ್ಲಾಪು, ರಹಿಮಾನ್ ಕೊಲೆಗೆ ಬಜ್ಪೆ ಚಲೋದಲ್ಲಿ ಮಾಡಿರುವ ಹೇಟ್ ಸ್ಪೀಚ್ ಕಾರಣ ಎಂದಿದ್ದಾರೆ. ಪೊಲೀಸರು, ಸರಕಾರ ಹೇಟ್ ಸ್ಪೀಚ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ದಿನೇಶ್ ಗುಂಡೂರಾವ್, ಕಲ್ಲಾಪುರನ್ನು ಹೊರ ಕಳಿಸುವಂತೆ ಹೇಳಿದ್ದಾರೆ. ದಿನೇಶ್ ಗುಂಡೂರಾವ್ ಹೊರಡುವಾಗಲೂ ಉಸ್ಮಾನ್ ಕಲ್ಲಾಪು ಆಕ್ರೋಶ ಹೊರ ಹಾಕಿದ್ದಾರೆ.
ಬಜಪೆ ಚಲೋದಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಕೊಲ್ಲಬೇಕು ಎಂದು ಸಿನಿಮಾದ ಶೈಲಿಯಲ್ಲಿ ಹೇಳಿಕೆ ನೀಡಿರುವವರನ್ನು ಮೊದಲು ಬಂಧಿಸಲಿ. ಯಾರ ಜೀವ ಹೋಗಬಾರದು. ದ.ಕ. ಜಿಲ್ಲೆ ಶಾಂತಿಯುತವಾಗಿ ಇರಬೇಕೆಂಬ ಉದ್ದೇಶ ನಮ್ಮದು. ನಾವು ಕಾಂಗ್ರೆಸ್ ನಾಯಕರೇ, ನಮ್ಮದೇ ಸರ್ಕಾರ ಇದೆ. ಪೋಲಿಸ್ ಇಲಾಖೆಗೆ ಆದೇಶ ಕೊಟ್ಟು ತಪ್ಪು ಮಾಡಿದವರನ್ನು ಬಂಧಿಸಲಿ ಎಂದರು.
ಫೇಸ್ಬುಕ್ನಲ್ಲಿ ಬರೆದರೆ ಬಂಧಿಸುತ್ತಾರೆ. ನಮಗೆ ಸಪೋರ್ಟ್ ಮಾಡುವುದು ಬೇಡ. ನಮಗೆ ನ್ಯಾಯ ಕೊಡಿ ಅಷ್ಟೇ. ಸದ್ಯ ಜಿಲ್ಲೆಗೆ ಹೊಸ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ. ಅವರ ಮೇಲೆ ವಿಶ್ವಾಸ ಇದೆ ಎಂದಿದ್ದಾರೆ.





