ಬಂಟ್ವಾಳ: ಬಸ್ ನಿಲ್ದಾಣದ ಬಳಿ ಹಮೀದ್ ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ
ಬಂಟ್ವಾಳ: ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಕ್ಕರಂಗಡಿ ನಿವಾಸಿ ಅಮ್ಮಿ ಯಾನೆ ಹಮೀದ್ ಎಂಬಾತನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರ ನೇತೃತ್ವದಲ್ಲಿ ಎಸ್.ಐ.ನಂದಕುಮಾರ್, ರಾಮಕೃಷ್ಣ, ಮಂಜುನಾಥ್ ಅವರ ತಂಡವನ್ನು ರಚಿಸಿ ಪತ್ತೆಗೆ ಬಲೆ ಬೀಸಿದ್ದರು.
ಇದೀಗ ಆರೋಪಿಗಳಾದ ಉಳ್ಳಂಜೆ ನೌಷದ್, ಕೈಕಂಬ ನಿವಾಸಿ ನವಾಜ್ ಯಾನೆ ಬೀಡಿ ನವಾಜ್, ನೆಹರುನಗರ ನಿವಾಸಿ ಮೇಹರೂಪ್ ಮತ್ತು ನೆಹರುನಗರ ನಿವಾಸಿ ರಿಝ್ವಾನ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.
ಕೊಲೆಗೆ ಯತ್ನಿಸಿದ್ದ ಯಾಕೆ?
ಹಮೀದ್ ತಸ್ಲೀಮ್ ಎಂಬಾತನ ಸ್ನೇಹಿತನಾಗಿದ್ದು, ತಸ್ಲೀಮ್ ಹಾಗೂ ಹ್ಯಾರೀಶ್ ನಡುವೆ ವೈಯಕ್ತಿಕ ವಿಚಾರದಲ್ಲಿ ಗಲಾಟೆ ನಡೆದು ಬಳಿಕ ಹ್ಯಾರೀಶ್ ತಸ್ಲೀಮ್ ಎಂಬಾತನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿ ಬಳಿಕ ಪರಾರಿಯಾಗಿದ್ದ.
ಈತನ ಪತ್ತೆಗೆ ಪೋಲೀಸರು ಬಲೆಬೀಸಿದ್ದರು. ಆದರೆ ಈವರೆಗೆ ಹ್ಯಾರೀಶ್ ಬಂಧನವಾಗಿಲ್ಲ. ಬಳಿಕ ತಸ್ಲೀಮ್ ನ ಸ್ನೇಹಿತ ಹಮೀದ್ ಆರೋಪಿ ಹ್ಯಾರೀಶ್ ಪತ್ತೆ ಮಾಡಿದವರಿಗೆ ರೂ.ಒಂದು ಲಕ್ಷ ಬಹುಮಾನ ಘೋಷಿಸಿ ಮೊಬೈಲ್ ನಲ್ಲಿ ಸ್ಟೇಟ್ಸ್ ಹಾಕಿಕೊಂಡಿದ್ದ. ಇದರ ಬಗ್ಗೆ ಕೋಪಗೊಂಡ ಹ್ಯಾರೀಶ್ ನೌಷದ್ ಬಳಸಿಕೊಂಡು ಹಮೀದ್ ಕೊಲೆಗೆ ಸಂಚು ರೂಪಿಸಿ ಅವರನ್ನು ಸುಪಾರಿ ನೀಡಿದ್ದಾನೆ ಎಂದು ಹೇಳಲಾಗಿದೆ. ಇದೀಗ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೋಲೀಸರು ಬಂಧಿಸಿದ್ದು, ಪ್ರಮುಖ ಸೂತ್ರದಾರಿ ಪೋಲೀಸರಿಗೆ ವಾಂಟೆಡ್ ಆಗಿರುವ ಹ್ಯಾರೀಶ್ ಪತ್ತೆಯಾಗಿಲ್ಲ.




