ಹಾಸನ: ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ:
ಇಬ್ಬರು ಮಕ್ಕಳು ಮೃತ್ಯು, ತಂದೆ-ತಾಯಿ ಸ್ಥಿತಿ ಗಂಭೀರ
ಹಾಸನ: ಇಲ್ಲಿನ ಹೊರವಲಯದಲ್ಲಿ ಬೈಕ್ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವಳಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿವೆ. ಅಪಘಾತದ ರಭಸಕ್ಕೆ ಪುಟ್ಟ ಕಂದಮ್ಮಗಳ ದೇಹಗಳು ಛಿದ್ರ ಛಿದ್ರಗೊಂಡಿವೆ.

ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅವಳಿ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಂದಮ್ಮಗಳ ದೇಹಗಳು ಛಿದ್ರ ಛಿದ್ರಗೊಂಡಿದ್ದು, ತಂದೆ-ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಣತಿ (3) ಹಾಗೂ ಪ್ರಣವ್(3) ಮೃತಪಟ್ಟ ಅವಳಿ ಮಕ್ಕಳಾಗಿದ್ದು, ಶಿವಾನಂದ್ ಹಾಗೂ ಪತ್ನಿ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಂಪತಿಯು ದ್ವಿಚಕ್ರವಾಹನದಲ್ಲಿ ಹಾಸನದ ಕಡೆಗೆ ಹೊರಟಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಕ್ಕಳು ಸ್ಥಳದಲ್ಲೇ ಅಸುನೀಗಿದ್ದಾರೆ. ಡಿಕ್ಕಿ ರಭಸಕ್ಕೆ ಮಕ್ಕಳ ಮೃತದೇಹಗಳು ಛಿದ್ರವಾಗಿದ್ದು, ಪ್ರಣತಿ ದೇಹ ಗುರುತೂ ಕೂಡ ಸಿಗದಂತಾಗಿದೆ.
ಮಕ್ಕಳಿಬ್ಬರೂ ಸುಮಾರು ಎರಡು ಕಿಲೋಮೀಟರ್ವರೆಗೆ ಲಾರಿ ಚಕ್ರಕ್ಕೆ ಸಿಲುಕಿಕೊಂಡೇ ತೆರಳಿದ್ದರಿಂದ ಹೀಗಾಗಿದೆ. ಅಪಘಾತವೆಸಗಿದ ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಶಿವಾನಂದ್ ಹಾಗೂ ಜ್ಯೋತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಹಾಸನ ಸಂಚಾರ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಲಾರಿ ಚಾಲಕನು ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಲಾರಿ ವಶಪಡಿಸಿಕೊಂಡ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.





