ವಿವಾದಿತ ಟೋಲ್ ಗೇಟ್ ತೆರವಿಗಗೆ ಮುಂದುವರಿದ SDPI ಹೋರಾಟ: ಫೆಬ್ರವರಿ 25 ರಂದು ಒಂದು ದಿನದ ಧರಣಿ ಸತ್ಯಾಗ್ರಹ ಮತ್ತು 22 ರಂದು ಏಕಕಾಲದಲ್ಲಿ ಜಿಲ್ಲೆಯಾದ್ಯಂತ ಸಹಿ ಸಂಗ್ರಹ ಅಭಿಯಾನ

ಸುಳ್ಯ: ಬ್ರಹ್ಮರಕೊಟ್ಲುವಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸದಾ ವಿವಾದಗಳಿಂದ ಕುಖ್ಯಾತಿ ಪಡೆದ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಕೈಗೊಂಡ ಹೋರಾಟದ ಮುಂದುವರೆದ ಬಾಗವಾಗಿ ಧರಣಿ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ ಎಂದು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮರಕೊಟ್ಲು ಟೋಲ್ಗೇಟ್ ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಿದೆ. ಈ ಟೋಲ್ಗೇಟ್ ವಿರುದ್ಧ ಎಸ್ಡಿಪಿಐ ಹಲವಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಟೋಲ್ ಗೇಟ್ ಸಿಬ್ಬಂದಿಗಳ ರೌದ್ರಾವತಾರ, ದಬ್ಬಾಳಿಕೆಗಳನ್ನು ಕಂಡು ಕಳೆದ ಕೆಲವು ದಿನಗಳಿಂದ ಬ್ರಹ್ಮರಕೊಟ್ಲು ಟೋಲ್ಗೇಟ್ ತೆರವಿಗೆ ಆಗ್ರಹಿಸಿ ನಿರಂತರವಾಗಿ ವಿವಿಧ ಸ್ತರದ ಅಧಿಕಾರಿಗಳನ್ನು, ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಬಿ ಸಿ ರೋಡ್ನಿಂದ ಬ್ರಹ್ಮರಕೊಟ್ಲು ಟೋಲ್ಗೇಟ್ ವರೆಗೆ ಬೃಹತ್ ಪಾದಯಾತ್ರೆ ನಡೆಸಿ ಪ್ರತಿಭಟನೆಯೂ ನಡೆಸಲಾಗಿತ್ತು.
ಈ ಹೋರಾಟದ ಮುಂದುವರಿದ ಭಾಗವಾಗಿ ಇದೇ ಬರುವ ಫೆಬ್ರವರಿ 22 ರಂದು ಪಕ್ಷದ ವತಿಯಿಂದ ಬ್ರಹ್ಮರಕೊಟ್ಲು ಟೋಲ್ಗೇಟ್ ತೆರವುಗೊಳಿಸುವಂತೆ ಒತ್ತಾಯಿಸಿ ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಿದೆ, ಹಾಗೂ ಫೆಬ್ರವರಿ 25ರಂದು ಬ್ರಹ್ಮರಕೊಟ್ಲು ಟೋಲ್ಗೇಟ್ ಬಳಿ ಬೆಳಗ್ಗಿನಿಂದ ಸಂಜೆಯವರೆಗೆ ಸಾರ್ವಜನಿಕರನ್ನು ಸೇರಿಸಿಕೊಂಡು ಧರಣಿ ನಡೆಸಲಿದ್ದೇವೆ, ಸಹಿ ಸಂಗ್ರಹ ಅಭಿಯಾನಕ್ಕೆ ಎಲ್ಲಾ ವಾಹನ ಚಾಲಕರು, ಸಾರ್ವಜನಿಕರು ಸಹಿ ಹಾಕುವ ಮೂಲಕ ಹೋರಾಟಕ್ಕೆ ನೈತಿಕ ಬೆಂಬಲ ನೀಡಬೇಕು ಮತ್ತು 25 ರಂದು ನಡೆಯುವ ಧರಣಿ ಸತ್ಯಾಗ್ರಹಕ್ಕೆ ಭಾಗವಹಿಸಬೇಕೆಂದು ಸಿದ್ದೀಕ್ ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.