ವಸತಿ ಶಾಲೆಯ ಬಾಯ್ಲರ್ ಬಿದ್ದು ಬಾಲಕ ಸಾವು: ಇಬ್ಬರು ಆರೋಪಿಗಳ ಬಂಧನ
ದಾವಣಗೆರೆ: ಇಲ್ಲಿನ ವಸತಿ ಶಾಲೆಯೊಂದರಲ್ಲಿ ಬಾಯ್ಲರ್ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಸತಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ನನ್ನು ಪೊಲೀಸರು ಬಂಧಿಸಿದ್ದಾರೆ. ಪೋಷಕರ ದೂರಿನ ಮೇರೆಗೆ ಬಂಧಿಸಲಾಗಿದೆ.
ಇತ್ತೀಚೆಗೆ ನಗರದ ಮಂಜುನಾಥಸ್ವಾಮಿ ಪರಿಶಿಷ್ಟ ವರ್ಗಗಳ ವಸತಿ ನಿಲಯದಲ್ಲಿ ಬಾಲಕ ರಂಗನಾಥ್ ಮೇಲೆ ಬಾಯ್ಲರ್ ಬಿದ್ದು ಸಾವನ್ನಪ್ಪಿದ್ದ. ಬಾಯ್ಲರ್ಗೆ ವಾರ್ಡನ್ ಕಟ್ಟಿಗೆ ಹಾಕಿ ಬರಲು ಬಾಲಕನಿಗೆ ಹೇಳಿದ್ದರು. ಕಟ್ಟಿಗೆ ಹಾಕಲು ತೆರಳಿದ್ದಾಗ ಈ ಅವಘಡ ನಡೆದಿತ್ತು.
ಅವಘಡ ನಡೆದಾಗ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬಾಲಕನ ತಂದೆ ರಾಮಪ್ಪ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.




