ಪುತ್ತೂರು: ಬಾಡಿಗೆಗಿದ್ದ ಕಟ್ಟಡಗಳ ಕಾನೂನು ಬಾಹಿರವಾಗಿ ಧ್ವಂಸ: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ದೂರು ದಾಖಲು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಓರ್ವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಉಜಿರೆ ನಿವಾಸಿ ದಿ| ಜಯಶ್ರೀ ಹೊಳ್ಳ ಅವರ ಪುತ್ರ ವಿಜಯ ರಾಘವೇಂದ್ರ ದೂರು ನೀಡಿದವರು. ಇವರ ಅಜ್ಜ ವಿಷ್ಣಯ್ಯ ಹೊಳ್ಳ ಎಂಬವರಿಗೆ ದೇಗುಲದಿಂದ ಬಾಡಿಗೆಗೆ ನೀಡಿದ ಸ್ಥಳದಲ್ಲಿ ವಿಷ್ಣಯ್ಯ ಹೊಳ್ಳರ ನಿಧನದ ಬಳಿಕ ಪುತ್ರ ಗಣಪತಿ ವಿಷ್ಣು ಹೊಳ್ಳ, ಅವರ ಸಾವಿನ ಬಳಿಕ ಪತ್ನಿ ಶಾರದಮ್ಮನವರು ವಾಸಿಸುತ್ತಿದ್ದರು.
ಈ ಮಧ್ಯೆ ಇಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಪುತ್ತೂರು ಪುರಸಭೆಯಿಂದ ಮನೆ ನಂಬರುಗಳನ್ನು ಪಡೆಯಲಾಗಿತ್ತು. 1998-99ರಲ್ಲಿ ಇದನ್ನು ಶಾರದಮ್ಮನವರಿಂದ ದೂರುದಾರರ ತಾಯಿ ಜಯಶ್ರೀ ಹೊಳ್ಳ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.