ಪುತ್ತೂರು: ನಿದ್ದೆ ಮಂಪರಿಗೆ ಜಾರಿದ ಚಾಲಕ: ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದ ಕಾರು

ಪುತ್ತೂರು: ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ.
ಕಾರನ್ನು ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಅವರು ಚಲಾಯಿಸುತ್ತಿದ್ದರು. ಹಾಗೂ ಕಾರಿನಲ್ಲಿ ಚರಣ್ ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಈ ವೇಳೆ ಕಾರಿನಲ್ಲಿದ್ದ 10 ವರ್ಷದ ಬಾಲಕನೋರ್ವನ ಸಮಯಪ್ರಜ್ಞೆಯಿಂದ ಸ್ಥಳೀಯರ ಸಹಾಯದಿಂದಾಗಿ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಬಳಿಯ ಕಾಪು ಎಂಬಲ್ಲಿ ಗುರುವಾರ ಬೆಳಗ್ಗೆ 5.45ರಿಂದ 6 ಗಂಟೆ ಸುಮಾರಿಗೆ ನಡೆದಿದೆ.
ಮುಂಡೂರಿನಲ್ಲಿ ನಡೆದಿದ್ದ ಒತ್ತೆಕೋಲದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಚಾಲಕ ನಿದ್ದೆ ಮಂಪರಿಗೆ ಒಳಗಾಗಿ ಕಾರು ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ಸೇಡಿಯಾಪು ಜಂಕ್ಷನ್ನಿಂದ 250 ಮೀ. ದೂರದ ಕಾವು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಕಾಲುವೆ ಒಳಗೆ ಸಿಲುಕಿದ್ದು, ಚಾಲಕನ ಬದಿಯ ಬಾಗಿಲು ಮೇಲ್ಮುಖವಾಗಿತ್ತು. ಮತ್ತೊಂದು ಬದಿ ಮಣ್ಣಿನಡಿಗೆ ಬಿದ್ದಿತ್ತು.