ಚಿಕ್ಕಮಗಳೂರು: Instagramನಲ್ಲಿ ಪರಿಚಯವಾಗಿದ್ದ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆ
ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಗ್ರಾಮದಲ್ಲಿ ನಡೆದಿದೆ.
ಕಿಚ್ಚಬ್ಬಿ ಗ್ರಾಮದ ಮಹಿಳೆ ತೃಪ್ತಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ್ದಾನೆ. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಹೋಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ, ಆತನ ಜೊತೆ ಮಾತು ಹಾಗೂ ಸ್ನೇಹವನ್ನು ಬಿಟ್ಟಿದ್ದಳು ಎನ್ನಲಾಗಿದೆ.
ಸಂಪೂರ್ಣ ಮಾತು ಬಿಟ್ಟ ಪರಿಣಾಮ ಕೋಪಗೊಂಡ ಚಿರಂಜೀವಿ ಶನಿವಾರ ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ಮನೆಯಿಂದ ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ. ತೃಪ್ತಿ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದು, ಘಟನೆಯಿಂದಾಗಿ ಗ್ರಾಮದ ಜನರು ಕೆಲಕಾಲ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಪ್ರಕರಣ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.




