ಪುತ್ತೂರು -ಉಪ್ಪಿನಂಗಡಿ ರಸ್ತೆ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ: ಬಿಜೆಪಿಯವರು ಕಲ್ಲಡ್ಕ-ಉಪ್ಪಿನಂಗಡಿ ಹೈವೇ ನರಕಯಾತನೆ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು: ಶಾಸಕ ಅಶೋಕ್ ರೈ

ಪುತ್ತೂರು: ಬಿ.ಸಿ ರೋಡಿಂದ ಕಲ್ಲಡ್ಕ ಮಾರ್ಗವಾಗಿ ಉಪ್ಪಿನಂಗಡಿಗೆ ತಲುಪಬೆಕಾದರೆ ಅರ್ಧ ಜೀವ ಕಳೆದಂತಾಗುತ್ತದೆ. ಈ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ ೧೦ ವರ್ಷಗಳೇ ಕಳೆದಿದೆ. ಈ ಹೆದ್ದಾರಿ ಮೂಲಕ ಸಂಚರಿಸುವ ವಾಹನ ಚಾಲಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಇದು ಗಂಭೀರ ಸಮಸ್ಯೆ ಇದರ ವಿರುದ್ಧ ಬಿಜೆಪಿವಯರು ಪ್ರತಿಭಟನೆ ಮಾಡಬೇಕಿತ್ತು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಹೇಳಿದರು.
ಪುತ್ತೂರು ಉಪ್ಪಿನಂಗಡಿ ರಸ್ತೆಯ ಕಾಮಗಾರಿ ವಿಳಂಬವನ್ನು ಪ್ರತಿಭಟಿಸಿ ನೆಕ್ಕಿಲಾಡಿಯಲ್ಲಿ ಬಿಜೆಪಿ ಪ್ರತಿಭಟನೆ ಆಯೋಜನೆ ಮಾಡಿತ್ತು. ಈ ಬಗ್ಗೆ ಪತ್ರಕರ್ತರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಾಸಕರು ಪುತ್ತೂರು ಉಪ್ಪಿನಂಗಡಿ ರಸ್ತೆ ಕಾಮಗಾರಿ ನಡೆಯುತ್ತಲೇ ಇದೆ. ಮಳೆ ಬರುವಾಗ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಕೆಲಸವಿಲ್ಲದ್ದಕ್ಕೆ ಅಲ್ಲಿ ಸೇರಿ ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿ ಪ್ರತಿಭಟನೆ ಮಾಡುವುದಿದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಬೆಳ್ತಂಗಡಿಯಲ್ಲೇ ರಸ್ತೆಯೇ ಇಲ್ಲದಂತಾಗಿದೆ ಬೆಳ್ತಂಗಡಿಯ ರಸ್ತೆಯನ್ನು ನೋಡಿದರೆ ಪುತ್ತೂರು ಉಪ್ಪಿನಂಗಡಿ ರಸ್ತೆ ವಿಚಾರ ದೊಡ್ಡ ಸಮಸ್ಯೆಯೇ ಅಲ್ಲ. ಬೆಳ್ತಂಗಡಿಯಲ್ಲಿ ಕಳೆದ ಏಳು ವರ್ಷಗಳಿಂದ ರಸ್ತೆ ಅಭಿವೃದ್ಧಿಯೇ ಆಗಿಲ್ಲ. ವಾಹನ ಸಂಚಾರ ಮಾಡುವಾಗ ಸೊಂಟ ನೋವು ಶುರುವಾಗಬಹುದು. ಅಲ್ಲಿ ಯಾರು ಶಾಸಕರಿದ್ದಾರೆ ಎಂಬುದು ಬಿಜೆಪಿಯವರಿಗೆ ಗೊತ್ತಿಲ್ವ? ಪುತ್ತೂರು ಉಪ್ಪಿನಂಗಡಿ ರಸ್ತೆಯನ್ನು ಹೇಗೆ ಅಭಿವೃದ್ಧಿ ಮಾಡಬೇಕೆಂಬುದು ನಮಗೆ ಗೊತ್ತಿದೆ. ಈಗ ಸ್ವಲ್ಪ ಮಳೆ ಇದೆ ಕಡಿಮೆಯಾಗಲಿ ಆಮೇಲೆ ಈ ರಸ್ತೆ, ರಾಜಮರ್ಗವಾಗಿ ಪರಿವರ್ತನೆಯಾಗಲಿದೆ. ರಸ್ತೆಯುದ್ದಕ್ಕೂ ದಾರಿ ದೀಪವನ್ನು ಅಳವಡಿಸಿ, ರಸ್ತೆ ಮಧ್ಯೆ ಹೂವಿನ ಗಿಡಗಳನ್ನು ನೆಟ್ಟು ಸುಂದರವಾದ ರಸ್ತೆಯ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ ಶಾಸಕರು, ಜನರಿಗೆ ಎಲ್ಲವೂ ಗೊತ್ತಿದೆ ಬಿಜೆಪಿಯವರು ಅಭಿವೃದ್ಧಿಗೆ ಸಹಕಾರ ಕೊಡುವುದನ್ನು ಸ್ವಲ್ಪ ಕಲಿಯಲಿ ಎಂದು ಹೇಳಿದರು.
ನಮಗೂ ಪ್ರತಿಭಟನೆ ಮಾಡುವ ಅವಕಾಶ ಇದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದೆ. ಹೆದ್ದಾರಿಯ ಅಕ್ಕಪಕ್ಕದ ಜನ ದೂಳು ತಿಂದು ಹೈರಾಣಾಗಿದ್ದಾರೆ, ಕಲ್ಲಡ್ಕದಲ್ಲಿ ನಿತ್ಯವೂ ರಸ್ತೆ ಬ್ಲಾಕ್ ಆಗುತ್ತಿದೆ. ಉಪ್ಪಿನಂಗಡಿ ಪೇಟೆಯೂ ದೂಳುಮಯವಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಳೆದ ಹತ್ತು ವರ್ಷಗಳಿಂದ ಜನಸಹಿಸಿಕೊಂಡಿದ್ದಾರೆ ಈ ವಿಚಾರವನ್ನು ಮುಂದಿಟ್ಡು ಕಾಂಗ್ರೆಸ್ಸಿಗರಾದ ನಮಗೂ ಪ್ರತಿಭಟನೆ ಮಾಡುವ ಎಲ್ಲಾ ಅವಕಾಶಗಳು ಇದೆ ಎಂಬುದನ್ನೂ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.