ಮೂಲ್ಕಿ: ಮನೆಯ ಅಡುಗೆ ಕೋಣೆಯೊಳಗೆ ನುಗ್ಗಿದ ಚಿರತೆ
ಮೂಲ್ಕಿ : ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆ ನುಗ್ಗಿದ ಘಟನೆ ಸಂಭವಿಸಿದೆ.
ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೋನಿನ ಮೂಲಕ ಚಿರತೆಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡಿದರು.
ಶನಿವಾರ ರಾತ್ರಿ 9:30 ಸುಮಾರಿಗೆ ಸದಾನಂದ ಕೋಟ್ಯಾನ್ ಅವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ದಿಢೀರನೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ಅವರ ನಾಯಿ ಬೊಗಳಲು ಶುರು ಮಾಡಿದ್ದು ಸದಾನಂದ ಕೋಟ್ಯಾನ್ ಚಿರತೆಯನ್ನು ನೋಡಿ ಕಂಗಾಲಾಗಿದ್ದಾರೆ.
ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಚಿರತೆ ಹಿಡಿಯಲು ಮುಂದಾಗಿ ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿದರು. ಮಧ್ಯ ರಾತ್ರಿ ಸುಮಾರು 2.30 ರ ವೇಳೆಗೆ ಚಿರತೆ ಬೋನಿನೊಳಗೆ ಬಿದ್ದಿದೆ




