ಮಲ್ಪೆ ಬೀಚ್: ಕಲಿಕೆಗಾಗಿ ಭಿಕ್ಷಾಟನೆ: ಇಬ್ಬರು ಅಪ್ರಾಪ್ತ ಬಾಲಕಿಯರ ರಕ್ಷಣೆ
ಉಡುಪಿ: ಅಪ್ರಾಪ್ತ ಪ್ರಾಯದ ಇರ್ವರು ಬಾಲಕಿಯರನ್ನು ರಕ್ಷಿಸಿರುವ ಘಟನೆ ಮಲ್ಪೆ ಬೀಚಿನಲ್ಲಿ ಶುಕ್ರವಾರ ನಡೆದಿದೆ.
ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ. ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇವೆ, ಪೋಷಕರಿಲ್ಲದೆ ಅಸಹಾಯಕರಾದೆವು. ಕಲಿಯುವ ಉದ್ದೇಶಕ್ಕಾಗಿ ಹಣ ಕ್ರೋಢೀಕರಿಸಲು, ಹಾವೇರಿಯಿಂದ ಉಡುಪಿಗೆ ಭಿಕ್ಷೆಯಾಚಿಸಲು ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.
ಬೀಚಿನಲ್ಲಿ ವಿಹರಿಸುತ್ತಿದ್ದ ಇರ್ವರು ಬಾಲಕಿಯರ ಚಲನವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಅವರಿಗೆ, ಬಾಲಕಿಯರು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತಕ್ಷಣ ಅವರು ಅಪ್ರಾಪ್ತ ಬಾಲಕಿಯರ ರಕ್ಷಣೆಗೈಯಲು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಒಳಕಾಡುರವರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.




