ಉಡುಪಿ: ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ
ಉಡುಪಿ: ಬೈಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಒತ್ತಿನೆಣೆ ತಿರುವಿನಲ್ಲಿ ಗುಡ್ಡದ ಮಣ್ಣು ಕುಸಿದ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ರಾತ್ರಿ ಅಧಿಕ ಮಳೆ ಸುರಿದ ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ.
ಗುಡ್ಡದ ಮೇಲ್ಭಾಗದಲ್ಲಿ ಮಣ್ಣು ಅಪಾಯಕಾರಿ ಸ್ಥಿತಿಯಲ್ಲಿದೆ. ಕೆಲವು ತಿಂಗಳ ಹಿಂದೆ ಅಗ್ನಿಶಾಮಕ ವಾಹನದ ಮೂಲಕ ನೀರು ಸಿಂಪಡಿಸಿ ಕುಸಿಯುವ ಭೀತಿಯಲ್ಲಿರುವ ಗುಡ್ಡದ ಮಣ್ಣನ್ನು ಸಮತಟ್ಟು ಮಾಡಲಾಗಿತ್ತು.
ಈ ಹಿಂದೆಯೂ ಈ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವವಿದ್ದಾಗ ಮಣ್ಣು ತೆರವುಗೊಳಿಸಿ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ ಕಳೆದೆರಡು ದಿನದಿಂದ ಮಳೆಯ ಪ್ರಮಾಣ ಅಧಿಕವಾದ ಕಾರಣ ಗುಡ್ಡದ ಮಣ್ಣು ಕುಸಿದಿದೆ.
ಭೂ ಕುಸಿತದಿಂದ ಚರಂಡಿಗೆ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ. ಗುಡ್ಡದ ಮಣ್ಣು ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.
ಸ್ಥಳಕ್ಕೆ ತೆರಳಿದ ಐಆರ್ಬಿ ಅಧಿಕಾರಿಗಳು ಮಣ್ಣು ತೆರವುಗೊಳಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಒತ್ತಿನೆಣೆ ತಿರುವಿನ ರಾಘವೇಂದ್ರ ಮಠದ ಬಳಿ ಕುಸಿತ ಸಂಭವಿಸುವ ಆತಂಕ ಇರುವ ಕಾರಣ ಹೆದ್ದಾರಿ ಇಲಾಖೆ ಮತ್ತು ಐಆರ್ಬಿ ಕಂಪೆನಿ ಪ್ಲಾಸ್ಟರಿಂಗ್ ಮೂಲಕ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದೆ.




