ಪಣಂಬೂರು: ಹೊಸ ಮೊಬೈಲ್ ಹಾಳು ಮಾಡಿದ್ದಕ್ಕೆ ವ್ಯಕ್ತಿಯ ಕೊಲೆ: ಆರೋಪಿಯನ್ನು ಬಂಧಿಸಿದ ಪೊಲೀಸರು
ಮಂಗಳೂರು: ಪಣಂಬೂರು ಪೊಲೀಸ್ ಠಾಣೆಯ ತೋಟಾಬೆಂಗ್ರೆಯ ಬೊಬ್ಬರ್ಯ ದೇವಸ್ಥಾನದ ಬಳಿ ಕಡಲ ಕಿನಾರೆಯಲ್ಲಿ ಸೆ.21ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾತನನ್ನು ಕಡಲ ಕಿನಾರೆ ಬಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ಧರ್ಮರಾಜ್ ಸುವರ್ಣ ಎಂಬಾತನನ್ನು ಬಂಧಿಸಲಾಗಿದೆ.
ಈತನನ್ನು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳದಲ್ಲಿ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಧರ್ಮರಾಜ್ ಮತ್ತು ಮೃತ ಮುತ್ತು ಬಸವರಾಜ್ ಪರಿಚಿತರು. ಇತ್ತೀಚೆಗೆ ಆರೋಪಿ ಧರ್ಮರಾಜ್ ಹೊಸ ಮೊಬೈಲ್ ತೆಗೆದುಕೊಂಡಿದ್ದ. ಆ ಮೊಬೈಲನ್ನು ಮುತ್ತು ಬಸವರಾಜ್ ತೆಗೆದುಕೊಂಡಿದ್ದು, ವಾಪಾಸ್ ನೀಡದೆ ಹಾಳು ಮಾಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿಯು ಮುತ್ತು ಬಸವರಾಜನಿಗೆ ಮರದ ಸೋಂಟೆಯಲ್ಲಿ ಹೊಡೆದು ಕೊಲೆ ಮಾಡಿದ್ದ.




