ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೂಲಕ ವಂಚನೆ: ಪುತ್ತೂರು ಮೂಲದ ವ್ಯಕ್ತಿ ಸಹಿತ ನಾಲ್ವರ ಬಂಧನ
ಉಡುಪಿ: ಆನ್ಲೈನ್ ಟ್ರೇಡಿಂಗ್ ಮೋಸದ ಕುರಿತು ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಜನ ಆರೋಪಿಗಳನ್ನು ಬಂಧಿಸಿ, ರೂ. 13,00,000/- ನಗದು ವಶಪಡಿಸಿಕೊಳ್ಳಲಾಗಿದೆ.
ಉಪೇಂದ್ರಭಟ್ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಅವರನ್ನು ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ಮೆಂಟ್ ಗ್ರೂಪ್ಗೆ ಸೇರಿಸಿದ್ದಾರೆ ಎಂದು ನಂಬಿಸಿ, WhatsApp ಮೂಲಕ ಲಾಭಾಂಶಗಳ ಬಗ್ಗೆ ಮಾಹಿತಿ ನೀಡಿ ಅವರಿಗೆ VIP-203-845 ಎಂಬ ಅಕೌಂಟ್ ನಂಬರನ್ನು ನೀಡಿದ್ದು, ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಒಟ್ಟು ರೂ. 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದಾರೆ.
ಈ ಸಂಬಂಧ ಸೆನ್ ಉಡುಪಿ ಪೊಲೀಸ್ ಠಾಣೆಯಲ್ಲಿ ಠಾಣಾ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯ ವೇಳೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳಾದ ಮಹಮ್ಮದ್ ಮುಸ್ತಫಾ ಪಿ (36) ಅಮ್ಮುಂಜೆ ಮನೆ, ಕುರಿಯ ಗ್ರಾಮ, ಪುತ್ತೂರು ತಾಲೂಕು, ಖಾಲಿದ್ ಬಿ. (39) ಬತ್ತೇರಿ ಹೌಸ್, ಕುಂಬ್ಳೆ, ಮಂಜೇಶ್ವರ, ಕಾಸರಗೋಡು, ಮೊಹಮ್ಮದ್ ಸಫಾನ್ ಕೆ.ಎ (22) ನೀರ್ಚಾಲ್ ಗ್ರಾಮ, ಕಾಸರಗೋಡು, ಮತ್ತು ಸತೀಶ್ ಶೇಟ್ (22) ಬಿಜೈ, ಮಂಗಳೂರು ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳಿಂದ 5 ಮೊಬೈಲ್ ಫೋನ್ಗಳು ಮತ್ತು ರೂ. 13,00,000 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ್ ಪ್ರಮುಖ ಸೂತ್ರದಾರರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಯ್ಯ ಟಿ.ಎಸ್, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಲ್ಲಿ, ಸೆನ್ ಠಾಣೆ ಪಿ.ಐ ರಾಮಚಂದ್ರ ನಾಯಕ್, ಎ.ಎಸ್.ಐ ರಾಜೇಶ್, ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಪ್ರವೀಣ್ ಕುಮಾರ್, ಅರುಣ್ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘುವೇಂದ್ರ, ಪ್ರಶಾಂತ್ ಪ್ರಸನ್ನ, ಸಿ. ಸಲ್ಮಾನ್ ಮತ್ತು ಚಾಲಕ ಸುದೀಪ್ ಅವರು ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡವನ್ನು ಉಡುಪಿ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಪ್ರಶಂಸಿಸಿದ್ದಾರೆ.




