ಮಡಿಕೇರಿ: ಭಾರಿ ಮಳೆ ಗಾಳಿಗೆ ಗುಡ್ಡ ಕುಸಿತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಗಾಳಿ ಗುರುವಾರ ಮುಂದುವರಿದಿದೆ.
ಬೀಸುತ್ತಿರುವ ಬಿರುಸಿನ ಗಾಳಿಗೆ ಅಲ್ಲಲ್ಲಿ ಮರಗಳು ಬುಡಮೇಲಾಗುತ್ತಿವೆ. ಗುಡ್ಡದಿಂದ ಮಣ್ಣು ರಸ್ತೆಗೆ ಜಾರುತ್ತಿದೆ.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ರಸ್ತೆಯಲ್ಲಿ ಗುಡ್ಡದಿಂದ ಮಣ್ಣು ರಸ್ತೆಗೆ ಬಿದ್ದು ಸಂಚಾರ ಕಡಿತಗೊಂಡಿದೆ. ತಲಕಾವೇರಿ- ಭಾಗಮಂಡಲ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿದೆ.
ರಾತ್ರಿ ಬಿರುಸಿನ ಮಳೆ ಸುರಿದ ಕಾರಣಕ್ಕೆ ಸೋಮವಾರಪೇಟೆ ತಾಲ್ಲೂಕಿನ ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನ 40 ಶಾಲೆಗಳಿಗೆ ಬುಧವಾರವೇ ರಜೆ ಘೋಷಿಸಲಾಗಿತ್ತು. ಮರಗಳು, ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.




